ADVERTISEMENT

ಸಚಿವ ಆರಗ ವಜಾಕ್ಕೆ ಆಗ್ರಹ

ಪಿಎಸ್‌ಐ ಪರೀಕ್ಷೆ ಅಕ್ರಮ: ರಾಜ್ಯಪಾಲರಿಗೆ ಎಎಪಿ ಮನವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 18:41 IST
Last Updated 26 ಏಪ್ರಿಲ್ 2022, 18:41 IST
ರಾಜ್ಯಪಾಲ ತಾವರಚಂದ್‌ ಗೆಹಲೋತ್ ಅವರಿಗೆ ಎಎಪಿ ಮುಖಂಡರು ಮನವಿ ಸಲ್ಲಿಸಿದರು. ‍ಪೃಥ್ವಿ ರೆಡ್ಡಿ, ಭಾಸ್ಕರ ರಾವ್‌, ಮುಖಂಡರಾದ ನಾಗಣ್ಣ ಗೌಡ, ಚನ್ನಪ್ಪಗೌಡ ನೆಲ್ಲೂರು ಹಾಗೂ ಜಗದೀಶ್ ಚಂದ್ರ ನಿಯೋಗದಲ್ಲಿ ಇದ್ದರು.
ರಾಜ್ಯಪಾಲ ತಾವರಚಂದ್‌ ಗೆಹಲೋತ್ ಅವರಿಗೆ ಎಎಪಿ ಮುಖಂಡರು ಮನವಿ ಸಲ್ಲಿಸಿದರು. ‍ಪೃಥ್ವಿ ರೆಡ್ಡಿ, ಭಾಸ್ಕರ ರಾವ್‌, ಮುಖಂಡರಾದ ನಾಗಣ್ಣ ಗೌಡ, ಚನ್ನಪ್ಪಗೌಡ ನೆಲ್ಲೂರು ಹಾಗೂ ಜಗದೀಶ್ ಚಂದ್ರ ನಿಯೋಗದಲ್ಲಿ ಇದ್ದರು.   

ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಎಎಪಿ ರಾಜ್ಯ ಘಟಕ ಆಗ್ರಹಿಸಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ಮುಖಂಡ ಭಾಸ್ಕರ ರಾವ್‌ ನೇತೃತ್ವದ ನಿಯೋಗವು ರಾಜ್ಯಪಾಲ ತಾವರಚಂದ್‌ ಗೆಹಲೋತ್‌ ಅವರನ್ನು ಮಂಗಳವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು.

‘ರಾಜ್ಯದ 52 ಸಾವಿರ ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆ ಬರೆದಿದ್ದಾರೆ. ಈಗ ಅಕ್ರಮ ಬಯಲಾಗಿರುವ ಕಾರಣ ಮರುಪರೀಕ್ಷೆ ನಡೆಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ನೂತನ ಪ್ರಾಧಿಕಾರ ರಚಿಸಿ ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು’ ಎಂದು ಪೃಥ್ವಿ ರೆಡ್ಡಿ ಮನವಿ ಮಾಡಿದರು.

ADVERTISEMENT

‘ಸಿಐಡಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ರಾಜ್ಯ ಸರ್ಕಾರವು ತನ್ನ ಪ್ರಭಾವ ಬಳಸಿ ತನಿಖೆ ವಿಳಂಬವಾಗುವಂತೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.