ಬೆಂಗಳೂರು: ‘ಡಿ.ಜೆ.ಹಳ್ಳಿ ಹಿಂಸಾಚಾರದಲ್ಲಿನ ಹಾನಿಯ ಹೊಣೆ ನಿಗದಿ ಮಾಡಲು ನೇಮಕಗೊಂಡಿರುವ ಕ್ಲೇಮ್ ಕಮಿಷನರ್ ಅವರ ಕಾರ್ಯವೈಖರಿ ಜ.18ರಿಂದ ಪರಿಣಾಮಕಾರಿಯಾಗಿ ಆರಂಭವಾಗುವಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಕ್ಲೇಮ್ ಕಮಿಷನರ್ ಆಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರನ್ನು ಭೇಟಿ ಮಾಡಿ ಅವರಿಗೆ ಅಗತ್ಯ ಇರುವ ಎಲ್ಲ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.
‘ಮೂಲಸೌಕರ್ಯಗಳ ಬಗ್ಗೆ ನೋಡಲ್ ಅಧಿಕಾರಿಯಾಗಲಿ ಅಥವಾ ಬೇರೆ ಯಾವ ಅಧಿಕಾರಿಯೂ ನನಗೆ ಮಾಹಿತಿ ನೀಡಿಲ್ಲ’ ಎಂದು ನ್ಯಾಯಮೂರ್ತಿ ಕೆಂಪಣ್ಣ ಅವರು ಸಲ್ಲಿಸಿದ್ದ ವರದಿಯನ್ನು ಪೀಠ ಪರಿಶೀಲನೆ ನಡೆಸಿತು.
‘2020ರ ಅಕ್ಟೋಬರ್ 1ರಂದು ಕೆಂಪಣ್ಣ ಅವರನ್ನು ಹೈಕೋರ್ಟ್ ನೇಮಕ ಮಾಡಿದೆ. ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ಪತ್ರ ಬರೆಯಬೇಕಾದ ಸಂದರ್ಭ ಬಂದಿರುವುದು ದುರದೃಷ್ಟಕರ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
‘ಈ ಸಂಬಂಧ ಹೈಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದ್ದರೂ, ಸರ್ಕಾರ ಪಾಲಿಸದೇ ಇರುವುದು ಶೋಚನೀಯ’ ಎಂದು ಪೀಠ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.