ಬೆಂಗಳೂರು: ‘ಗಣೇಶನ ಹಬ್ಬದಲ್ಲಿ ಪ್ಲಾಸ್ಟಿಕ್ ಬಳಸಬಾರದು. ಪೂಜೆಗೆ ದೊಡ್ಡಗಣೇಶನನ್ನು ಬಳಸುವ ಬದಲು ಹೆಚ್ಚು ಭಕ್ತಿಯನ್ನು ಹೊಂದಿರಬೇಕು’ ಎಂದು ಹಸಿರು ನ್ಯಾಯಮಂಡಳಿ ಸಲಹೆ ಮೇರೆಗೆ ನೇಮಕವಾದ ಕಸ ನಿರ್ವಹಣೆ ರಾಜ್ಯಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್.ಬಿ.ಅಡಿ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಕೆಂಗೇರಿ ಉಪನಗರದ ಶೇಷಾದ್ರಿಪುರ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಮತ್ತು ಮಲ್ಟಿ ಸ್ಕಿಲ್ಸ್ ಟ್ರೈನಿಂಗ್ ಆ್ಯಂಡ್ ಇಂಟರ್ ಡಿಸಿಪ್ಲಿನರಿ ರಿಸರ್ಚ್ ಇನ್ಸ್ಟಿಟ್ಯೂಟ್, ಸೃಷ್ಟಿ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಕೆಂಗೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣೇಶಮೂರ್ತಿ ತಯಾರಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗಣ್ಯರ ಕರೆ: ಮಣ್ಣಿನ ಗಣೇಶ ವಿಗ್ರಹಗಳನ್ನು ಆರಾಧಿಸುವ ಮೂಲಕ ಈ ಬಾರಿ ಪರಿಸರಸ್ನೇಹಿ ಹಬ್ಬವನ್ನು ಆಚರಿಸಿ ಎಂದು ಗಣ್ಯರು ದೂರವಾಣಿ ಕರೆ ಮೂಲಕ ಮನವಿ ಮಾಡಲಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದೇ ಮೊದಲ ಬಾರಿಗೆ ಧ್ವನಿಮುದ್ರಿತ ಕರೆಗಳ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ನಟ ಯಶ್, ಮಂಡಳಿ ಅಧ್ಯಕ್ಷ ಡಾ.ಸುಧಾಕರ್ ಅವರ ಧ್ವನಿ ಸಂದೇಶ ಕೇಳಿಸಲಿದೆ. ಈ ಬಾರಿ ಮಣ್ಣಿನ ಗಣೇಶನನ್ನು ಪೂಜಿಸಿ, ಪಿಒಪಿ ಮೂರ್ತಿ ಬಳಸಬೇಡಿ. ಪರಿಸರ ಸಂರಕ್ಷಿಸುವ ಉದ್ದೇಶದೊಂದಿಗೆ ನಾವೆಲ್ಲರೂ ವಿಘ್ನ ನಿವಾರಕನನ್ನು ಪೂಜಿಸೋಣ’ ಎಂಬಲ್ಲಿಗೆ ಕರೆ ಮುಗಿಯುತ್ತದೆ.
ಶನಿವಾರವೇ ಸಾವಿರಾರು ಜನರ ಮೊಬೈಲ್ಗಳಿಗೆ ಕರೆ ಹೋಗಿದ್ದು, ಒಟ್ಟು 5 ಲಕ್ಷ ಜನರ ಮೊಬೈಲ್ಗಳಿಗೆ ಕರೆ ಮಾಡುವ ಗುರಿಯನ್ನು ಮಂಡಳಿ ಹಾಕಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.