ADVERTISEMENT

ಶ್ರೀಕ್ಷೇತ್ರ ಧರ್ಮಸ್ಥಳದಿಂದ ವೆಂಟಿಲೇಟರ್, ಕಾನ್ಸೆಂಟ್ರೇಟರ್

ಪುಣ್ಯ ಕ್ಷೇತ್ರಗಳ ಸೇವೆ ಶ್ಲಾಘನೀಯ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:54 IST
Last Updated 29 ಮೇ 2021, 20:54 IST
ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಿದ ಆಮ್ಲಜನಕ ವೆಂಟಲೇಟರ್, ಕಾನ್ಸೆಂಟ್ರೇಟರ್ ಮತ್ತು ಹೈಪೋ ಯಂತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್, ಬೆಂಗಳೂರು ನಗರ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಅಚಾರ್ ಇದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಿದ ಆಮ್ಲಜನಕ ವೆಂಟಲೇಟರ್, ಕಾನ್ಸೆಂಟ್ರೇಟರ್ ಮತ್ತು ಹೈಪೋ ಯಂತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್, ಬೆಂಗಳೂರು ನಗರ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಅಚಾರ್ ಇದ್ದರು.   

ಬೆಂಗಳೂರು: ಕೋವಿಡ್ ರೋಗಿಗಳ ಆರೈಕೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಉಚಿತವಾಗಿ ನೀಡಲಾದ ಆಮ್ಲಜನಕ ವೆಂಟಿಲೇಟರ್, ಆಮ್ಲಜನಕ ಕಾನ್ಸೆಂಟ್ರೇಟರ್ ಮತ್ತು ಹೈಪೋ ಯಂತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಕೊರೊನಾ ಸೋಂಕಿತರ ಆರೈಕೆಗೆ ಸರ್ಕಾರದ ಜೊತೆ ಮಠಗಳು, ಪುಣ್ಯ ಕ್ಷೇತ್ರಗಳು ಸೇರಿ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರ ಸೇವೆ ಸ್ಮರಣೀಯ’ ಎಂದರು.

‘ರಾಜ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 300 ಆಮ್ಲಜನಕ ವೆಂಟಿಲೇಟರ್‌ ನೀಡಲಾಗಿದೆ.ಈ ಉದ್ದೇಶಕ್ಕೆ ₹2 ಕೋಟಿಯಷ್ಟು ವೆಚ್ಚವಾಗಿದೆ. ನೆಲಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು ವೆಂಟಿಲೇಟರ್ ಮತ್ತು ಹತ್ತು ಆಮ್ಲಜನಕ ಕಾನ್ಸೆಂಟ್ರೇಟರ್ ನೀಡಲಾಗಿದೆ. ತಲಾ 20ಕಾನ್ಸೆಂಟ್ರೇಟರ್‌ಗಳನ್ನು ದೇವನಹಳ್ಳಿ ಮತ್ತು ಆನೇಕಲ್‌ ಗ್ರಾಮಗಳಿಗೆ ನೀಡಲಾಗಿದೆ. ದೇವನಹಳ್ಳಿ ಮತ್ತು ಆನೇಕಲ್‌ನಲ್ಲಿ ಕಾನ್ಸೆಂಟ್ರೇಟರ್ ಬ್ಯಾಂಕ್‍ ತೆರೆಯಲಾಗಿದ್ದು, ಅಗತ್ಯವಿರುವರಿಗೆ ಇಲ್ಲಿನ ಸಿಬ್ಬಂದಿ ಒದಗಿಸುತ್ತಾರೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದರು.

ADVERTISEMENT

‘ಆಮ್ಲಜನಕ ನೀಡುವ ಕುರಿತು ಅನೇಕ ಸಿಬ್ಬಂದಿಗೆ ಶ್ರೀಕ್ಷೇತ್ರದ ವತಿಯಿಂದ ತರಬೇತಿ ನೀಡಲಾಗಿದೆ. ಕೊರೊನಾ ಸೋಂಕಿನಿಂದ ಮುಕ್ತರಾದ ಮೇಲೆ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡರೆ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಅಂಥವರಿಗೆ ದೇವನಹಳ್ಳಿ ಮತ್ತು ಆನೇಕಲ್‌ನಲ್ಲಿ ಉಚಿತವಾಗಿ ಆಮ್ಲಜನಕ ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಪ್ರದೇಶದವರು ಈ ಸೌಲಭ್ಯ ಪಡೆದುಕೊಳ್ಳಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.