ADVERTISEMENT

ಬೆಂಗಳೂರು: ಘನತ್ಯಾಜ್ಯ ಎಸ್‌ಟಿಎಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 0:14 IST
Last Updated 29 ನವೆಂಬರ್ 2024, 0:14 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿನ್ನಿಮಿಲ್‌ ರಸ್ತೆಯಲ್ಲಿರುವ&nbsp;ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕಕ್ಕೆ ಗುರುವಾರ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಸತಿ ಸಚಿವ ಜಮೀರ್ ಅಹಮದ್‌ ಖಾನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿನ್ನಿಮಿಲ್‌ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕಕ್ಕೆ ಗುರುವಾರ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಸತಿ ಸಚಿವ ಜಮೀರ್ ಅಹಮದ್‌ ಖಾನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ಆಟೊಗಳಿಂದ ನೇರವಾಗಿ ವಿಂಗಡಣೆ ಘಟಕಕ್ಕೆ ವಿಲೇವಾರಿಯಾಗುವ ‘ದ್ವಿತೀಯ ಹಂತದ ವರ್ಗಾವಣೆ ಘಟಕ’ಕ್ಕೆ (ಎಸ್‌ಟಿಎಸ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.

ADVERTISEMENT

ಚಾಮರಾಜಪೇಟೆ ಹಾಗೂ ಗಾಂಧಿನಗರ ವಿಧಾನಸಭೆ ಕ್ಷೇತ್ರಗಳ ಒಂಬತ್ತು ವಾರ್ಡ್‌ಗಳ ತ್ಯಾಜ್ಯವನ್ನು ಆಟೊಗಳ ಮೂಲಕ ಘಟಕಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಬೃಹತ್‌ ಕಂಟೈನರ್‌ಗಳಲ್ಲಿ (ಕ್ಯಾಪ್ಸೂಲ್‌) ಯಾವುದೇ ದ್ರವತ್ಯಾಜ್ಯ ಹೊರಬೀಳದಂತೆ ಸಂಸ್ಕರಣೆ ಘಟಕ ಅಥವಾ ಭೂಭರ್ತಿ ಸ್ಥಳಗಳಿಗೆ ರವಾನಿಸಿ ವಿಲೇವಾರಿ ಮಾಡಲಾಗುತ್ತದೆ.

‘ಮನುಷ್ಯನ ಆರೋಗ್ಯ ಅತ್ಯಂತ ಮುಖ್ಯ. ಹೀಗಾಗಿ ಮನೆ, ರಸ್ತೆ ಸುತ್ತಮುತ್ತ ತ್ಯಾಜ್ಯ ಇಲ್ಲದೆ ಸ್ವಚ್ಛ ಇರುವುದು ಅಗತ್ಯ. ಎಸ್‌ಟಿಎಸ್‌ ವ್ಯವಸ್ಥೆಯಿಂದ ಸ್ವಚ್ಛತೆ ಜೊತೆಗೆ, ಒಣ ತ್ಯಾಜ್ಯ, ಹಸಿ ತ್ಯಾಜ್ಯ ಸ್ವಯಂಚಾಲಿತವಾಗಿ ವಿಂಗಡಣೆಯಾಗುತ್ತದೆ. ಯಾವುದೇ ರೀತಿಯ ವಾಸನೆ ಇಲ್ಲದೆ ಘಟಕ ಕಾರ್ಯ ನಿರ್ವಹಿಸುತ್ತದೆ. ಇಂತಹ ವ್ಯವಸ್ಥೆ ಎಲ್ಲೆಡೆ ಕ್ಷಿಪ್ರವಾಗಿ ಬರಬೇಕು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳ್ಳೆಯ ಸೌಲಭ್ಯವಿದೆ. ಕೆಲವು ಬಾರಿ ಲೋಪಗಳಾಗಿರಬಹುದು. ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಎಸ್‌ಟಿಎಸ್‌ಗಳಿಂದ ಸಂಸ್ಕರಣೆ ಘಟಕಕ್ಕೆ ಬೃಹತ್‌ ಕಂಟೈನರ್‌ಗಳ ಮೂಲಕ ತ್ಯಾಜ್ಯವನ್ನು ಸಾಗಿಸಲಾಗುತ್ತಿದೆ. ಈ ವಾಹನಗಳು ದ್ರವತ್ಯಾಜ್ಯ ಸೋರಿಕೆಯಾಗದಂತೆ ತಡೆಯುವ ತಂತ್ರಜ್ಞಾನವನ್ನು ಹೊಂದಿವೆ. ಪ್ರಸ್ತುತ ಪಾಲಿಕೆಯಲ್ಲಿ 14 ಘನ ಮೀಟರ್ ಸಾಮರ್ಥ್ಯದ ಕಾಂಪ್ಯಾಕ್ಟರ್‌ಗಳು ತ್ಯಾಜ್ಯವನ್ನು ಸಾಗಿಸುತ್ತಿವೆ. ಎಸ್‌ಟಿಎಸ್‌ಗಳಿಂದ 20 ಘನ ಮೀಟರ್‌ ಸಾಮರ್ಥ್ಯದ ಕಂಟೈನರ್‌ಗಳ ಮೂಲಕ ತ್ಯಾಜ್ಯ ಸಾಗಿಸುವುದರಿಂದ ವಾಹನಗಳ ಸಂಖ್ಯೆ ಕಡಿಮೆಯಾಗಿ, ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ ತ್ಯಾಜ್ಯವನ್ನು ಯಾಂತ್ರೀಕೃತವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಬಹುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ಮಾಹಿತಿ ನೀಡಿದರು.

‘ವಿಂಗಡಣೆಯಾಗದ ಕಸವನ್ನೂ ಎಸ್‌ಟಿಎಸ್‌ನಲ್ಲಿ ಸ್ವಯಂಚಾಲಿತ ಯಂತ್ರದ ಮೂಲಕ ವಿಂಗಡಣೆ ಮಾಡಲಾಗುತ್ತದೆ’ ಎಂದರು.

ಬಿನ್ನಿಮಿಲ್ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕದಲ್ಲಿರುವ ಕಂಟೈನರ್‌ಗಳು (ಕ್ಯಾಪ್ಸೂಲ್‌)

₹12.50 ಕೋಟಿ; ವೆಚ್ಚದಲ್ಲಿ ಎಸ್‌ಟಿಎಸ್‌ ನಿರ್ಮಾಣ
40 ಟನ್‌; ನಿತ್ಯ ತ್ಯಾಜ್ಯ ವಿಂಗಡಣೆ (ಪ್ರತಿ ಗಂಟೆಗೆ 5 ಟನ್‌) 200 ಟನ್‌; ಪ್ರತಿನಿತ್ಯ ತ್ಯಾಜ್ಯ ಸಂಗ್ರಹ 3 ಪಾಳಿಯಲ್ಲಿ; ತ್ಯಾಜ್ಯ ಸಂಗ್ರಹ ವಿಂಡಗಣೆ 18 ಟನ್‌; ಪ್ರತಿ ಕಂಟೈನರ್‌ನಲ್ಲಿ (ಕ್ಯಾಪ್ಸೂಲ್‌) ರವಾನೆಯಾಗುವ ತ್ಯಾಜ್ಯ

ಯಾವ ವಾರ್ಡ್‌ಗಳಿಂದ ತ್ಯಾಜ್ಯ?

ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಜಗಜೀವನರಾಮ್‌ ನಗರ ರಾಯಪುರ ಛಲವಾದಿಪಾಳ್ಯ ಕೆ.ಆರ್‌. ಮಾರುಕಟ್ಟೆ (ಮಾರುಕಟ್ಟೆ ಪ್ರದೇಶ ಹೊರತುಪಡಿಸಿ) ಚಾಮರಾಜಪೇಟೆ ಆಜಾದ್‌ ನಗರ ವಾರ್ಡ್‌ ಹಾಗೂ ಗಾಂಧಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಟನ್‌ಪೇಟೆ ಬಿನ್ನಿಪೇಟೆ ಚಿಕ್ಕಪೇಟೆ ವಾರ್ಡ್‌ಗಳಿಂದ ಆಟೊಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಬಿನ್ನಿಪೇಟೆಯಲ್ಲಿರುವ ‘ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ’ಕ್ಕೆ ರವಾನೆಯಾಗಲಿದೆ.

ಎಲ್ಲೆಲ್ಲಿ ಎಸ್‌ಟಿಎಸ್?

  • ಬಿಟಿಎಂ ಲೇಔಟ್‌ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಈಜಿಪುರದಲ್ಲಿ 2024ರ ಮಾರ್ಚ್‌ 13ರಂದು ಎಸ್‌ಟಿಎಸ್‌ ಕಾರ್ಯಾರಂಭ

  • ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಛಲವಾದಿಪಾಳ್ಯದಲ್ಲಿ 2024ರ ನವೆಂಬರ್‌ 28ರಂದು ಚಾಲನೆ

  • ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಎಚ್‌ಬಿಆರ್ ಬಡಾವಣೆ ಪ್ರದೇಶದಲ್ಲಿ ಎಸ್‌ಟಿೆಸ್‌ ನಿರ್ಮಾಣವಾಗುತ್ತಿದ್ದು 2025 ಜನವರಿಗೆ ಪೂರ್ಣ

33 ಕ್ಯಾಂಪ್ಯಾಕ್ಟರ್‌ ಸ್ಥಗಿತ: ತುಷಾರ್‌ ಗಿರಿನಾಥ್‌
‘ಎಸ್‌ಟಿಎಸ್‌ ಸ್ಥಾಪನೆಯಿಂದಾಗಿ ಒಂಬತ್ತು ವಾರ್ಡ್‌ಗಳಲ್ಲಿ 33 ಕಾಂಪ್ಯಾಕ್ಟರ್‌ಗಳ ಸಂಚಾರ ಸ್ಥಗಿತಗೊಳ್ಳಲಿದೆ. 211 ಆಟೊಗಳು ನೇರವಾಗಿ ಎಸ್‌ಟಿಎಸ್‌ಗೆ ಕಸವನ್ನು ವಿಲೇವಾರಿ ಮಾಡಲಿವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ‘ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಆಟೊದಲ್ಲಿ ತೆಗೆದುಕೊಂಡು ಹೋಗಿ ಕಾಂಪ್ಯಾಕ್ಟರ್‌ಗಳಿಗೆ ರಸ್ತೆಗಳಲ್ಲಿ ತುಂಬಲಾಗುತ್ತಿತ್ತು. ಇದರಿಂದ ವಾಸನೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಹೊಸ ವ್ಯವಸ್ಥೆಯಿಂದ ಇದು ನಿಯಂತ್ರಣಕ್ಕೆ ಬರಲಿದೆ. ಆಟೊದಿಂದ ನೇರವಾಗಿ ಎಸ್‌ಟಿಎಸ್‌ಗೆ ತ್ಯಾಜ್ಯ ವಿಲೇವಾರಿಯಾಗುತ್ತದೆ. ಪ್ರತಿ ಆಟೊ ಎಷ್ಟು ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡುತ್ತದೆ ಎಂಬುದನ್ನು ದಾಖಲಿಸಲಾಗುತ್ತದೆ. ಈ ಘಟಕದಿಂದ ನಾಗರಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ವಾಸನೆಯೂ ಇರುವುದಿಲ್ಲ’ ಎಂದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಒಂದು ಎಸ್‌ಟಿಎಸ್‌ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಅದರಂತೆ ನಗರದಲ್ಲಿ 27 ಎಸ್‌ಟಿಎಸ್‌ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಇದೀಗ ಎರಡು ಆರಂಭವಾಗಿದ್ದು ಇನ್ನೊಂದು ಜನವರಿಯಲ್ಲಿ ಆರಂಭವಾಗಲಿದೆ. ಪ್ರತಿ ಘಟಕಕ್ಕೆ ₹13 ಕೋಟಿ ವೆಚ್ಚ ಮಾಡಲಾಗುತ್ತದೆ’ ಎಂದರು.
ತ್ಯಾಜ್ಯ ವಿಂಗಡಣೆ: ಶೇ 55ರಷ್ಟು ಮಾತ್ರ ಪ್ರಗತಿ
‘ಘನತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ವಾಹನಗಳಿಗೆ ನೀಡುವುದು ಕಡ್ಡಾಯವಾಗಿದೆ. ಆದರೆ ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಸರಾಸರಿ ಶೇ 55ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ’ ಎಂದು  ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ತಿಳಿಸಿದರು. ‘ಹಸಿ ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಷ್ಟಾದರೂ ಶೇ 50ರಿಂದ ಶೇ 85ರಷ್ಟು ಪ್ರಗತಿಯಾಗಿದೆ. ವಿಂಗಡಣೆಯಾಗದ ತ್ಯಾಜ್ಯವನ್ನು ಭೂಭರ್ತಿ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ತೀವ್ರ ಪ್ರಮಾಣದ ತೊಂದರೆಯುಂಟಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.