ಬೆಂಗಳೂರು: ‘ಕಂಪನಿಗಳು ಕಾಲಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು’ ಎಂದುಎಚ್ಎಎಲ್ ಹಣಕಾಸು ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಹೇಳಿದರು.
ನಗರದ ಜೆ.ಎನ್. ಟಾಟಾ ಸಭಾಂಗಣದಲ್ಲಿ ಶುಕ್ರವಾರ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟ್ಸ್ ಆಫ್ ಇಂಡಿಯಾದ (ಐಸಿಎಐ) ಬೆಂಗಳೂರು ಘಟಕ ಮತ್ತು ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್ ವತಿಯಿಂದಹಮ್ಮಿಕೊಂಡಿದ್ದ ‘ಪ್ರಾದೇಶಿಕ ಸಿಎಂಎ (ಕಾಸ್ಟ್ ಆ್ಯಂಡ್ ಮ್ಯಾನೇಜ್ಮೆಂಟ್ ಅಕೌಂಟೆನ್ಸಿ) ಸಮ್ಮೇಳನ-2018'ದಲ್ಲಿ ಅವರು ಮಾತನಾಡಿದರು.
‘ಯಾವುದೇ ಕಂಪನಿ ಹಿಂದಿನ ಅಂಕಿ-ಸಂಖ್ಯೆಗಳನ್ನೇ ಮುಂದಿಟ್ಟುಕೊಂಡು ಸಾಧನೆ ಮಂತ್ರ ಜಪಿಸಿದರೆ ಸಾಲದು. ಅದಕ್ಕೆ ಪೂರಕವಾಗಿ ಕಾರ್ಯತಂತ್ರಗಳನ್ನೂ ರೂಪಿಸಬೇಕಾಗುತ್ತದೆ. ಬದಲಾವಣೆ ಜತೆಗೆ ಹೆಜ್ಜೆ ಹಾಕದ ಸಂಸ್ಥೆ ಅಪ್ರಸ್ತುತ ಆಗುವ ಅಪಾಯವಿದೆ’ ಎಂದು ಹೇಳಿದರು.
‘ಎಚ್ಎಎಲ್ ಒಂದು ಕಾಲಕ್ಕೆ ವೈಮಾನಿಕ ಕ್ಷೇತ್ರದಲ್ಲಿ ಏಕಸ್ವಾಮ್ಯತೆ ಹೊಂದಿತ್ತು. ಆದರೆ, ಇಂದು ಸಾಕಷ್ಟು ಸ್ಪರ್ಧೆಯನ್ನು ಎದುರಿಸುತ್ತಿದೆ. ಕೇವಲ ಎಚ್ಎಎಲ್ ಅಲ್ಲ. ಎಲ್ಲ ಕಂಪನಿಗಳಿಗೂ ಈ ಮಾತು ಅನ್ವಯಿಸುತ್ತದೆ’ ಎಂದು ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಎಫ್ಕೆಸಿಸಿಐ) ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ‘ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ಆದ್ಯತೆ ಕೊಡಬೇಕು. ನಿರುದ್ಯೋಗ ನಿವಾರಣೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ಆದ್ಯತೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
‘ದೇಶದಲ್ಲಿ ಪ್ರಸ್ತುತ ಸುಮಾರು ಎರಡೂವರೆ ಕೋಟಿ ಜನ ಸರ್ಕಾರಿ ಉದ್ಯೋಗದಲ್ಲಿದ್ದಾರೆ. 50 ಕೋಟಿಗೂ ಅಧಿಕ ಜನರಿಗೆ ಕೈಗಾರಿಕೆಗಳು ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸಿವೆ. ಈ ದೃಷ್ಟಿಯಲ್ಲಿ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.