ADVERTISEMENT

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಅಶ್ವತ್ಥನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 23:03 IST
Last Updated 3 ಸೆಪ್ಟೆಂಬರ್ 2021, 23:03 IST
ಬೆಂಗಳೂರು ನಗರ ವಿಶ್ವವಿದ್ಯಾಲಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕ್ರೀಡಾಪಟು ಪ್ರಿಯಾ ಎಚ್‌. ಮೋಹನ್ ಅವರನ್ನು ಗೌರವಿಸಿದರು. ದಯಾನಂದ ಪೈ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರ್ಪಣಾ, ಕುಲಸಚಿವ ಕೆ.ಎನ್. ಶ್ರೀಧರ್ ಹಾಗೂ ಡಾ.ಬಿ. ರಮೇಶ್ ಇದ್ದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕ್ರೀಡಾಪಟು ಪ್ರಿಯಾ ಎಚ್‌. ಮೋಹನ್ ಅವರನ್ನು ಗೌರವಿಸಿದರು. ದಯಾನಂದ ಪೈ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರ್ಪಣಾ, ಕುಲಸಚಿವ ಕೆ.ಎನ್. ಶ್ರೀಧರ್ ಹಾಗೂ ಡಾ.ಬಿ. ರಮೇಶ್ ಇದ್ದರು.   

ಬೆಂಗಳೂರು:‘ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯವುಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು.

‘ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬುದನ್ನು ಕೇಳುತ್ತಲೇ ಇದ್ದೇವೆ. ದೇಶವನ್ನು ಸಮರ್ಥವಾಗಿ ಕಟ್ಟಿ, ಬಲಿಷ್ಠವಾಗಿ ಮರು ರೂಪಿಸುವ ಶಕ್ತಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಇದೆ. ಆದರೆ, ಈ ನೀತಿಯ ಬಗ್ಗೆ ಕೆಲವರು ರಾಜಕೀಯ ಮಾಡುತ್ತಿರುವುದು ಬೇಸರವನ್ನುಂಟುಮಾಡಿದೆ.ಜ್ಞಾನ ಮತ್ತು ಕುಶಲತೆ ಈಗ ಅತ್ಯಗತ್ಯ. ಜ್ಞಾನಕ್ಕೆ ಪೂರಕವಾಗಿ ಕುಶಲತೆಯೂ ಸೇರಿದರೆ ಅದ್ಭುತಗಳನ್ನೇ ಸೃಷ್ಟಿ ಮಾಡಬಹುದು’ ಎಂದರು.

ADVERTISEMENT

‘ವಿದ್ಯಾರ್ಥಿಯು ಯಾವುದೇ ವಿಷಯ ಅಧ್ಯಯನ ಮಾಡಬೇಕಾದರೆ ಏತಕ್ಕಾಗಿ ಇದನ್ನು ಓದಬೇಕು? ಅದರಿಂದ ನನಗೇನು ಪ್ರಯೋಜನ ಎಂದು ಆಲೋಚನೆ ಮಾಡುತ್ತಾನೆ. ಹೀಗೆ ಚಿಂತಿಸುವ ಪ್ರತಿ ವಿದ್ಯಾರ್ಥಿಗೂ ನಿರ್ದಿಷ್ಟ ಗುರಿ ತಲುಪಲು ಹಾಗೂ ತನ್ನದೇ ಶಕ್ತಿಯಿಂದ ಬದುಕು ರೂಪಿಸಿಕೊಳ್ಳಲು ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.

ಉದ್ಯಮಿ ಬಿ. ದಯಾನಂದ ಪೈ ಮಾತನಾಡಿ, ‘ಕಾಲ ಕಾಲಕ್ಕೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿ ತರುತ್ತಲೇ ಇರಬೇಕು. ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.

ಇತ್ತೀಚೆಗೆ ಕೀನ್ಯಾದ ನೈರೋಬಿಯಲ್ಲಿ ನಡೆದ ಅಂತರರಾಷ್ಟ್ರೀಯ ವಿಶ್ವ ಜೂನಿಯರ್ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಪ್ರಿಯಾ ಎಚ್‌. ಮೋಹನ್ ಅವರಿಗೆದಯಾನಂದ ಪೈ ಅವರು ₹ 5 ಲಕ್ಷದ ಚೆಕ್ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.