ಬೆಂಗಳೂರು: ಹೆಸರಘಟ್ಟದ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಮೇಲೆ ತೆಂಗಿನಮರ ವಾಲಿದ್ದು, ಗ್ರಾಮಸ್ಥರು ಜೀವಭಯದಿಂದ ಓಡಾಡುವಂತಾಗಿದೆ.
‘ಅಂಜನಪ್ಪ ಎಂಬುವವರ ತೋಟದ ತೆಂಗಿನಮರವು ರಸ್ತೆ ಕಡೆ ವಾಲಿದೆ. ತೆಂಗಿನಮರದ ಬುಡದಲ್ಲಿ ಮೂರು ವಿದ್ಯುತ್ ಕಂಬಗಳಿವೆ. ಒಂದು ವೇಳೆ ಮರ ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಮರವನ್ನು ಕಡಿಯಲು ತೋಟದ ಮಾಲೀಕರಾದ ಅಂಜನಪ್ಪ ಒಪ್ಪಿದ್ದರೂ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ ತೋರಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಈ ರಸ್ತೆಯಲ್ಲಿ ಒಂದು ಗಂಟೆಗೆ 50ರಿಂದ 60 ವಾಹನಗಳು ಚಲಿಸುತ್ತವೆ. ಶಾಲಾ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ನಿತ್ಯ ಓಡಾಡುತ್ತಾರೆ. ಮುಖ್ಯ ಸಂಪರ್ಕ ರಸ್ತೆ ಇದಾಗಿದೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದರೆ ಓಡಾಡುವ ಜನಕ್ಕೆ ಅಪಾಯವಾಗಲಿದೆ. ಇಂತಹ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಬೇಕು’ ಎಂದು ಬಿಳಿಜಾಜಿ ಗೋವಿಂದರಾಜು ಆಗ್ರಹಿಸಿದರು.
ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಾಸನಾಯ್ಕ ಪ್ರತಿಕ್ರಿಯಿಸಿ, ‘ಸಮಸ್ಯೆಯನ್ನು ಎರಡು ದಿನಗಳಲ್ಲಿ ಬಗೆಹರಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.