
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹೊಯ್ಸಳ ವಾಹನದಲ್ಲಿ ಬಂದು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ರಾಜಗೋಪಾಲನಗರ ಪೊಲೀಸ್ ಠಾಣೆಯ ಎಎಸ್ಐ ನೀಲಾಂಜನೇಯಮೂರ್ತಿ ಹಾಗೂ ಕಾನ್ಸ್ಟೆಬಲ್ ಪ್ರಸನ್ನಕುಮಾರ್ ಅವರನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಮೇ 17ರಂದು ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೀಣ್ಯ 2ನೇ ಹಂತದಲ್ಲಿ ಸಾರ್ವಜನಿಕರೇ ‘ಕಳ್ಳ ಕಳ್ಳ’ ಎಂದು ಹೊಯ್ಸಳ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ಇದನ್ನು ಅಲ್ಲಿದ್ದ ಕೆಲವರು ವಿಡಿಯೊ ಮಾಡಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
‘ಅಂದು ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ರಾತ್ರಿ ವೇಳೆ ಜನರಿಂದ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದರು ಎನ್ನುವ ಆರೋಪವಿದೆ. ಆಟೊದಲ್ಲಿ ಬಂದಿದ್ದ ಇಬ್ಬರು, ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಆಗ ಗಾಬರಿಗೊಂಡ ಪೊಲೀಸರು ವೇಗವಾಗಿ ವಾಹನ ಚಲಾಯಿಸಿಕೊಂಡು ತೆರಳಿದ್ದರು. ಆಗ ವಾಹನ ಹಿಂಬಾಲಿಸಿದವರು ‘ಪೊಲೀಸ್ ಕಳ್ಳ... ಪೊಲೀಸ್ ಕಳ್ಳ...’ ಎಂದು ಜೋರಾಗಿ ಕಿರುಚಿದ್ದರು. ಆ ವಿಡಿಯೊ ಎಲ್ಲೆಡೆ ಹರಿದಾಡಿತ್ತು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.