ADVERTISEMENT

ವರ್ಗಾವಣೆ: ಆಯುಕ್ತರಿಗೆ ಎಚ್ಚರಿಕೆ

ಎ ವೃಂದದ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 21:50 IST
Last Updated 3 ಜುಲೈ 2020, 21:50 IST
ಬಿ.ಎಚ್‌.ಅನಿಲ್‌ ಕುಮಾರ್
ಬಿ.ಎಚ್‌.ಅನಿಲ್‌ ಕುಮಾರ್   

ಬೆಂಗಳೂರು: ಪೂರ್ವಾನುಮತಿ ಪಡೆಯದೆ ಪಾಲಿಕೆಯ ಎ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ.

ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರನ್ನು ರಸ್ತೆ ಮೂಲಸೌಕರ್ಯ/ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಆಯುಕ್ತರು ಇತ್ತೀಚೆಗೆ ವರ್ಗಾವಣೆ ಮಾಡಿದ್ದರು. ಪ್ರಹ್ಲಾದ್‌ ಅವರಿಗೆ ರಾಜಕಾಲುವೆ ವಿಭಾಗದ ಹೆಚ್ಚುವರಿ ಹೊಣೆಯನ್ನೂ ಮುಂದುವರಿಸಿದ್ದರು.

’ಗ್ರೂಪ್‌ ಎ ವೃಂದದ ಅಧಿಕಾರಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ, ಪಾಲಿಕೆಯ ಹಂತದಲ್ಲೇ ವರ್ಗಾಯಿಸಿದ್ದು ಸರಿಯಲ್ಲ. ಭವಿಷ್ಯದಲ್ಲಿ ಇಂತಹ ಸೇವಾ ವಿಷಯಗಳನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕು‘ ಎಂದು ನಗರಾಭಿವೃದ್ಧಿ ಇಲಾಖೆಯು ಆಯುಕ್ತರಿಗೆ ನಿರ್ದೇಶನ ನೀಡಿದೆ.

ADVERTISEMENT

ಈ ಹಿಂದೆ ಬಿಬಿಎಂಪಿಯ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಯನ್ನು ನೇಮಿಸಿಕೊಳ್ಳುವ ಅಧಿಕಾರ ಆಯುಕ್ತರಿಗೆ ಮಾತ್ರ ಇತ್ತು. ‘ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ– 2020’ ಉಲ್ಲಂಘಿಸಿ ಆಯುಕ್ತರು ಈ ಹಿಂದಿನಂತೆ ಅಧಿಕಾರ ಚಲಾಯಿಸಿ ಆಯುಕ್ತರು ವರ್ಗಾವಣೆ ಮಾಡಿದ್ದರು.

ಬಿಬಿಎಂಪಿಯ ವೃಂದ ಮತ್ತು ನೇಮಕಾತಿಯ ಹೊಸ ನಿಯಮದ ಪ್ರಕಾರ, ಎ ಗುಂಪಿನ ಅಧಿಕಾರಿಗಳನ್ನು ಹಾಗೂ ₹ 74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳನ್ನು ಸರ್ಕಾರವೇ (ನಗರಾಭಿವೃದ್ಧಿ ಇಲಾಖೆ) ನೇಮಿಸಬೇಕಿದೆ. ಬಿ ಮತ್ತು ಸಿ ಗುಂಪಿನ ಅಧಿಕಾರಿಗಳನ್ನು ಹಾಗೂ ಡಿ ಗುಂಪಿನ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.