ADVERTISEMENT

ಉಗ್ರರ ತಾಣ ಹೇಳಿಕೆಗೆ ಬದ್ಧ: ತೇಜಸ್ವಿ ಸೂರ್ಯ

'ಜನರಿಗೆ ನನ್ನ ಹೇಳಿಕೆ ಅರ್ಥವಾಗಿದೆ'

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:09 IST
Last Updated 30 ಸೆಪ್ಟೆಂಬರ್ 2020, 20:09 IST
ಬಿಜೆಪಿ ಕಚೇರಿ ಮುಂದೆ ಕನ್ನಡದ ಬಾವುಟ ಬೀಸಿದ ಸಂಸದ ತೇಜಸ್ವಿ ಸೂರ್ಯ.
ಬಿಜೆಪಿ ಕಚೇರಿ ಮುಂದೆ ಕನ್ನಡದ ಬಾವುಟ ಬೀಸಿದ ಸಂಸದ ತೇಜಸ್ವಿ ಸೂರ್ಯ.   

ಬೆಂಗಳೂರು: ‘ಬೆಂಗಳೂರು ಉಗ್ರರ ತಾಣವಾಗುತ್ತಿದೆ ಎಂಬ ಹೇಳಿಕೆಗೆ ಈಗಲೂ ಬದ್ಧ’ ಎಂದು ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಬುಧವಾರ ಪಕ್ಷದ ರಾಜ್ಯ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಹೇಳಿಕೆಯ ಅರ್ಥವನ್ನು ಜನರು ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯನ್ನು ಪ್ರಸ್ತಾಪಿಸಿದ ಅವರು, ‘ಬೆಂಗಳೂರಿನ ಪೊಲೀಸ್‌ ಠಾಣೆಯೊಂದನ್ನು ಧ್ವಂಸ ಮಾಡಲು ಮುಂದಾದಾಗ ನನ್ನ ರಕ್ತ ಕುದಿಯುತ್ತದೆ. ಪಿಎಫ್‌ಐ ಗೂಂಡಾಗಿರಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿತ್ತು. ಅದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್‌ನವರು ಕ್ಷಮೆ ಕೇಳಬೇಕು’ ಎಂದು ತೇಜಸ್ವಿ ಒತ್ತಾಯಿಸಿದರು.

ADVERTISEMENT

‘ಬೆಂಗಳೂರಿನ ಸುರಕ್ಷತೆಗೆ ಎನ್ಐಎ ಬೇಕು. ಆದರೆ, ಎನ್‌ಐಎ ಬರುವುದರಿಂದ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ನಡುವಿನ ಮ್ಯಾಚ್ ಫಿಕ್ಸಿಂಗ್‌ ಹಾಳಾಗುತ್ತದೆ. ಅದನ್ನು ತಪ್ಪಿಸಲು ಮನಸ್ಸಿಲ್ಲದ ಕಾರಣ ಕಾಂಗ್ರೆಸ್‌ ಮುಖಂಡರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

‘ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಕ್ಷಿಸಲಾಗದ ಕಾಂಗ್ರೆಸ್ಸಿಗರು ನನ್ನ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿ
ದ್ದಾರೆ. ಜೆಡಿಎಸ್‌ನವರೂ ಅಖಂಡ ಮನೆಗೆ ತೆರಳಿ ಸಾಂತ್ವನ ಹೇಳಿಲ್ಲ’ ಎಂದರು.

ಯುವಕರಿಗೆ ಮೋದಿ ಆದ್ಯತೆ: ಪ್ರಧಾನಿ ನರೇಂದ್ರ ಮೋದಿಯವರು ಯುವ ಜನರಿಗೆ ಆದ್ಯತೆ ಮತ್ತು ಅವಕಾಶ ನೀಡಿದೆ. ಪ್ರಾಮಾಣಿಕತೆಯಿಂದ ಹುದ್ದೆಯನ್ನು ನಿರ್ವಹಿಸುತ್ತೇನೆ. ದೇಶದಾದ್ಯಂತ ಪಕ್ಷ ಮತ್ತು ಯುವ ಘಟಕದ ಬಲವರ್ಧನೆಗೆ ಆದ್ಯತೆ ನೀಡುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.