ADVERTISEMENT

ಅನಾಮಧೇಯ ದೂರು: ತನಿಖೆ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:25 IST
Last Updated 3 ಅಕ್ಟೋಬರ್ 2019, 19:25 IST

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ನೀಡುವ ಅನಾಮಧೇಯ ದೂರುಗಳನ್ನು ಇನ್ನು ಮುಂದೆಯಾವುದೇ ತನಿಖೆ ಅಥವಾ ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್‌ ತಿಳಿಸಿದ್ದಾರೆ.

‘ಕೆಲವು ದೂರುಗಳು ವೈಯಕ್ತಿಕ ದ್ವೇಷ, ಅಸೂಯೆ ಮತ್ತು ಪೂರ್ವಗ್ರಹದಿಂದ ಕೂಡಿರುತ್ತವೆ. ಪೂರಕ ಮಾಹಿತಿ, ದಾಖಲೆಗಳೂ ಇರುವುದಿಲ್ಲ. ಇಂತಹ ದೂರುಗಳಿಂದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಮತ್ತು ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅವರು ಮುಕ್ತವಾಗಿ ಮತ್ತು ನಿರ್ಭೀತಿ
ಯಿಂದ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಪೂರ್ಣ ವಿಳಾಸವಿರುವ ದೂರುಗಳನ್ನು ಮಾತ್ರ ತನಿಖೆಗೆ ಪರಿಗಣಿಸಲಾಗುತ್ತದೆ’ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘವು ಸಲ್ಲಿಸಿದ್ದ ಮನವಿಯ ಮೇರೆಗೆ ಆಗಸ್ಟ್‌ 4ರಂದು ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿದ್ದ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು, ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಅನಾಮಧೇಯ ದೂರುಗಳನ್ನು ವಿಚಾರಣೆಗೆ ಪರಿಗಣಿಸದೆ ಇರುವ ನಿಟ್ಟಿನಲ್ಲಿ ಆದೇಶ ನೀಡುವಂತೆ ಸೂಚಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.