ADVERTISEMENT

ವೀರಶೈವ ಧರ್ಮ | ಗೊಂದಲ ಮೂಡಿಸುವ ಹೇಳಿಕೆ ಬೇಡ: ಪೀಠಾಧಿಪತಿಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:33 IST
Last Updated 10 ಮಾರ್ಚ್ 2025, 15:33 IST
<div class="paragraphs"><p>ವೀರಶೈವ</p></div>

ವೀರಶೈವ

   

ಬೆಂಗಳೂರು: ‘ವೀರಶೈವ ಧರ್ಮದ ಪ್ರಾಚೀನತೆ ಬಗ್ಗೆ ನೂರಾರು ಶಾಸನಗಳಲ್ಲಿ ಹಾಗೂ ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡಿದ್ದು, ಈ ಬಗ್ಗೆ ಸಮಾಜದಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದು ವೀರಶೈವ ಪೀಠಾಧಿಪತಿಗಳು ಹೇಳಿದ್ದಾರೆ.

ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ವೀರಶೈವ– ಲಿಂಗಾಯತ ಪ್ರತ್ಯೇಕಗೊಳಿಸುವ ಹೇಳಿಕೆಗಳ ಹಿಂದೆ ಪೂರ್ವಗ್ರಹಪೀಡಿತ ಯೋಚನೆ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕ್ರಿಸ್ತಪೂರ್ವದಿಂದ 19ನೇ ಶತಮಾನದವರೆಗಿನ ನೂರಾರು ಶಾಸನಗಳಲ್ಲಿ ವೀರಶೈವದ ಪ್ರಸ್ತಾಪವಿದೆ. ಸಂಸ್ಕೃತ, ಕನ್ನಡ, ತಮಿಳು, ತೆಲುಗು ಭಾಷೆಯ ಸಾಹಿತ್ಯ ಮತ್ತು ಶಾಸನಗಳು ವೀರಶೈವದ ಪ್ರಾಚೀನತೆಯನ್ನು ಸಾಬೀತುಪಡಿಸಿವೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಎಂ.ಎಂ. ಕಲಬುರ್ಗಿ ಪ್ರಧಾನ ಸಂಪಾದಕತ್ವದ ‘ವಚನ ಸಂಪುಟ’ಗಳಲ್ಲಿ ಬಸವಣ್ಣನವರೂ ಸೇರಿ 30 ಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದಪ್ರಯೋಗ ಮಾಡಿರುವುದನ್ನು ಉಲ್ಲೇಖಿಸಲಾಗಿದೆ’ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಬಸವಣ್ಣನವರೇ ತಮ್ಮ ವಚನದಲ್ಲಿ ತಾವು ನಿಜ ವೀರಶೈವ ಎಂದು ಹೇಳಿಕೊಂಡಿದ್ದಾರೆ. ಈಗ ಕೇವಲ ಮೀಸಲಾತಿಗಾಗಿ ವೀರಶೈವ ಧರ್ಮದ ಸನಾತನ ಘನತೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಪೀಠದ ಶ್ರೀಗಳು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.