ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ದೈಹಿಕ ಪರೀಕ್ಷೆಗೆ ನಕಲಿ ಅಭ್ಯರ್ಥಿಯನ್ನು ಕಳುಹಿಸಿದ್ದ ಅಸಲಿ ಅಭ್ಯರ್ಥಿ ಯಾಸೀನ್ ಅಬ್ದುಲ್ ಕರಿಸಾಬ್ (25) ಅವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದ ಯಾಸೀನ್, ತಮ್ಮ ಸ್ನೇಹಿತ ಸಚಿನ್ ಗುಗ್ಗರೆ ಅವರನ್ನು 2020ರ ನವೆಂಬರ್ 19ರಂದು ದೈಹಿಕ ಪರೀಕ್ಷೆಗೆ ಕಳುಹಿಸಿದ್ದರು. ಸಚಿನ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದರು. ಕಾನ್ಸ್ಟೆಬಲ್ ಹುದ್ದೆಗೆ ಯಾಸೀನ್ ಅರ್ಹತೆ ಗಿಟ್ಟಿಸಿಕೊಂಡಿದ್ದರು’ ಎಂದು ಪೊಲೀಸರು ಮೂಲಗಳು ಹೇಳಿವೆ.
‘ಕಾನ್ಸ್ಟೆಬಲ್ ಹುದ್ದೆಗೆ ಅರ್ಹತೆ ಪಡೆದವರ ದಾಖಲೆಗಳ ಪರಿಶೀಲನೆ ಇತ್ತೀಚೆಗೆ ನಡೆದಿತ್ತು. ಅದೇ ಸಂದರ್ಭದಲ್ಲಿ ಅಭ್ಯರ್ಥಿ ಯಾಸೀನ್ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಲಿಖಿತ ಹಾಗೂ ದೈಹಿಕ ಪರೀಕ್ಷೆ ವಿಡಿಯೊಗಳನ್ನು ಪರಿಶೀಲಿಸಿದಾಗ ನಕಲಿ ಅಭ್ಯರ್ಥಿ ಅಕ್ರಮ ಬಯಲಾಯಿತು’ ಎಂದೂ ತಿಳಿಸಿವೆ.
‘ಆರೋಪಿ ಯಾಸೀನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಕಲಿ ಅಭ್ಯರ್ಥಿ ಸಚಿನ್ ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.