ಬೆಂಗಳೂರು: ‘ಭಾರತದ ಸಂವಿಧಾನ ಎಂದರೆ ಕಥೆ, ಕಾದಂಬರಿ ಅಥವಾ ಕವನ ಅಲ್ಲ. ಮನುಷ್ಯ ಗರ್ಭದಲ್ಲಿ ಇದ್ದಾಗಿನಿಂದ ಆತನ ಅಂತ್ಯದ ತನಕ ರಕ್ಷಣೆ ನೀಡುವ ಎಲ್ಲಾ ಕಾನೂನುಗಳಿಗೆ ಅದು ತಾಯಿ ಇದ್ದಂತೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.
ಬಿಎಂಟಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಂಘ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಮತ್ತು ಮೀಸಲಾತಿ ಹೆಚ್ಚಳ’ ಕುರಿತ ಸಮಾಲೋಚನೆ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
‘ವಿದ್ಯಾಭ್ಯಾಸ, ವಿವಾಹ, ದುಡಿಮೆ, ಆಸ್ತಿ ಸಂಪಾದನೆ ಸೇರಿ ಯಾವುದೇ ಕೆಲಸಕ್ಕೂ ಒಂದಿಲ್ಲೊಂದು ಕಾನೂನಿನ ರಕ್ಷಣೆ ಇದೆ. ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಎಲ್ಲಾ ಜಾತಿಯವರಿಗೂ ಸಂವಿಧಾನದ ಅಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ದೊರಕಿದೆ’ ಎಂದರು.
‘ದೇಶದ ಇತಿಹಾಸವನ್ನು ನೋಡಿದರೆ ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ವಲಸೆ ಬಂದವರೇ ಆಗಿದ್ದೇವೆ. ಊರಿಗೊಂದು ಸಂಸ್ಕೃತಿ, ಆಚರಣೆಗಳಿವೆ. ಆಹಾರ ಪದ್ಧತಿಗಳೂ ವಿಭಿನ್ನವಾಗಿವೆ. ಆದರೆ, ಇಂದು ಇಂತಹದ್ದೇ ಆಹಾರ ಸೇವಿಸಬೇಕು, ಇದೇ ರೀತಿಯ ಬಟ್ಟೆ ಧರಿಸಬೇಕು ಎಂದು ಏಕ ಸಂಸ್ಕೃತಿಯನ್ನು ಹೇರಲು ಹೊರಟಿರುವುದು ಸರಿಯಲ್ಲ. ಇದರ ವಿರುದ್ಧದ ಧ್ವನಿ ಗಟ್ಟಿಯಾಗಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.