ಕೆಂಗೇರಿ: ಎಸ್.ಜೆ.ಬಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 500 ವಿದ್ಯಾರ್ಥಿಗಳು ಹಾಗೂ ಎಸ್.ಜೆ.ಬಿ. ಸ್ಕೂಲ್ ಆಫ್ ಆರ್ಕಿಟೆಕ್ಟರ್ ಸಂಸ್ಥೆಯ 120 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಎರಡೂ ಶಿಕ್ಷಣ ಸಂಸ್ಥೆಗಳ 7 ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಚೇರ್ಮನ್ ಡಾ.ಟಿ.ಜಿ. ಸೀತಾರಾಮ್, ‘ಕೌಶಲ ಎಂಬುದು ಉದ್ಯೋಗಾವಕಾಶ ಒದಗಿಸುವ ಕೀಲಿ ಕೈ. ತಂತ್ರಜ್ಞಾನದೊಂದಿಗೆ ಕೌಶಲವನ್ನು ಬೆಳೆಸಿಕೊಂಡರೆ ಅವಕಾಶಗಳು ತೆರೆದುಕೊಳ್ಳುತ್ತವೆ’ ಎಂದು ಅಭಿಪ್ರಾಯಪಟ್ಟರು.
ಆದಿ ಚುಂಚುನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ‘ಮೂರ್ನಾಲ್ಕು ದಶಕಗಳ ಹಿಂದೆ ಭಾರತದಲ್ಲಿ ಎಂಜಿನಿಯರ್ಗಳ ಕೊರತೆ ಇತ್ತು. ಬದಲಾದ ಕಾಲಮಾನದಲ್ಲಿ ಭಾರತವು ಪ್ರಪಂಚಕ್ಕೆ ಹೆಚ್ಚು ಎಂಜಿನಿಯರ್ಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದರು.
‘ಪದವಿ ಪಡೆದು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು‘ ಎಂದು ಬಿಜಿಎಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ ಹೇಳಿದರು.
ಇಸಿಇ ವಿಭಾಗದ ಜಿ.ರೇಷ್ಮ, ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದ ಎಲ್. ಮೋಹನ್ ಕುಮಾರ್ ತಲಾ ಏಳು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಪಡೆದುಕೊಂಡರು.
ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್(ಐಎಸ್ಟಿಇ) ಅಧ್ಯಕ್ಷ ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಎಥ್ನೋಟೆಕ್ ಅಕಾಡೆಮಿಕ್ ಸೊಲ್ಯೂಷನ್ಸ್ ಅಧ್ಯಕ್ಷ ಕಿರಣ್ ರಾಜಣ್ಣ, ಚಾಂಪಿಯನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕಿ ಹೇಮಾಮಣಿ, ಕಾಗ್ನಿಜೆಂಟ್ ಇಂಡಿಯಾ ಕ್ಯಾಂಪಸ್ ನೇಮಕಾತಿ ವಿಭಾಗದ ಮುಖ್ಯಸ್ಥೆ ಅಶ್ವತಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.