ADVERTISEMENT

‘ತೆರಿಗೆ ಸಲಹೆಗಾರರ ಮಸೂದೆ’ಗೆ ಸಹಕಾರ: ಭರವಸೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 20:40 IST
Last Updated 6 ಡಿಸೆಂಬರ್ 2020, 20:40 IST
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ   

ಬೆಂಗಳೂರು: ‘ಆರ್ಥಿಕತೆಗೆ ಶಿಸ್ತು ತರುವ ಉದ್ದೇಶದಿಂದ ಸಮಾಜದ ಎಲ್ಲ ಹಂತಗಳಲ್ಲಿ ಸಮರ್ಥವಾಗಿ ಕೆಲಸ ಮಾಡುವ ತೆರಿಗೆ ಸಲಹೆಗಾರರಿಗೆ (ಟ್ಯಾಕ್ಸ್ ಪ್ರಾಕ್ಟೀಷನರ್ಸ್) ಅನುಕೂಲವಾಗುವಂತೆ ಮಸೂದೆ ರೂಪಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲ ಪ್ರಯತ್ನ ನಡೆಸಲಾಗುವುದು’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಟ್ಯಾಕ್ಸ್ ಪ್ರಾಕ್ಟೀಷನರ್ ಗಳ ಸಂಸ್ಥೆಯ ವಾರ್ಷಿಕೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೇಶದ ಆರ್ಥಿಕತೆಯನ್ನು ಸದೃಢವಾಗಿ ಕಟ್ಟುವಲ್ಲಿ ತೆರಿಗೆ ಸಲಹೆಗಾರರ ಪಾತ್ರ ದೊಡ್ಡದು. ಅಭಿವೃದ್ಧಿಯ ಎಲ್ಲ ಹಂತಗಳಲ್ಲೂ ಇವರ ಕೆಲಸ ಮಹತ್ವದ್ದು. ರಾಜ್ಯದ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಿದೆ’ ಎಂದರು.

ADVERTISEMENT

‘ಯಾವುದೇ ಉದ್ಯಮ ಅಥವಾ ಕೈಗಾರಿಕೆ ಆರಂಭಿಸಲು ತೆರಿಗೆ ಸಲಹೆಗಾರರ ಸೇವೆಯೇ ಮೂಲ ಅಡಿಪಾಯ. ತೆರಿಗೆಗಳ ಆಧಾರದ ಮೇಲೆ ಎಲ್ಲ ವ್ಯವಹಾರಗಳಿಗೆ ಇವರು ಶಕ್ತಿ ತುಂಬುತ್ತಾರೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂಚೂಣಿಯಲ್ಲಿರಲು ಸಲಹೆಗಾರರ ಕೊಡುಗೆ ಅಪಾರ’ ಎಂದು ಹೇಳಿದರು.

ಟ್ಯಾಕ್ಸ್ ಪ್ರಾಕ್ಟೀಷನರ್ ಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷೆ ನಿಖಿತಾ ಬಡೇಕಾ, ಉಪಾಧ್ಯಕ್ಷ ಮಲ್ಲಾಡಿ ಶ್ರೀನಿವಾಸ, ದಕ್ಷಿಣ ವಿಭಾಗದ ಅಧ್ಯಕ್ಷ ಎಸ್.ನಂಜುಂಡ ಪ್ರಸಾದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.