ADVERTISEMENT

ಕೊರೊನಾ ಸೋಂಕು ಹಿನ್ನೆಲೆ: ಸಲೂನ್‌ಗಳಲ್ಲಿ ಈಗಲೂ ಗ್ರಾಹಕರ ಕೊರತೆ

ಶೇ 50ರಷ್ಟು ಆದಾಯ ಕುಸಿತ * ಹೇರ್‌ ಕಟಿಂಗ್‌ಗೆ ಮಾತ್ರ ಒಲವು

ಗುರು ಪಿ.ಎಸ್‌
Published 21 ಮೇ 2020, 13:14 IST
Last Updated 21 ಮೇ 2020, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಸಡಿಲಗೊಂಡು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ, ಹೇರ್‌ಕಟಿಂಗ್‌ ಶಾಪ್‌, ಸಲೂನ್‌ ಹಾಗೂ ಸ್ಪಾಗಳ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಗ್ರಾಹಕರು ಕ್ಷೌರದ ಅಂಗಡಿಗಳಿಗೆ ಹೋಗಲು ಈಗಲೂ ಹಿಂಜರಿಯುತ್ತಿದ್ದಾರೆ. ಕೆಲಸ ಪ್ರಾರಂಭಿಸಿ ಹಲವು ದಿನಗಳಾದರೂ ಶೇ 50ರಷ್ಟೂ ದುಡಿಮೆ ಆಗುತ್ತಿಲ್ಲ ಎಂದು ಕ್ಷೌರಿಕರು ಹೇಳುತ್ತಾರೆ.

‘ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಳಿಗೆ ತೆಗೆದಿದ್ದರೂ ಗ್ರಾಹಕರು ಬರುತ್ತಿಲ್ಲ. ಲಾಕ್‌ಡೌನ್‌ಗಿಂತಲೂ ಮೊದಲು ದಿನಕ್ಕೆ 30ರಿಂದ 35 ಗ್ರಾಹಕರು ಬರುತ್ತಿದ್ದರು. ಈಗ ಹತ್ತು ಜನರೂ ಬರುತ್ತಿಲ್ಲ’ ಎಂದು ಆರ್.ಟಿ. ನಗರದ ಸಲೂನ್‌ ಒಂದರ ಮಾಲೀಕ ಸಲೀಂ ಹೇಳಿದರು.

‘ಮೊದಲು ಹೇರ್ ಕಟ್‌ ಜೊತೆಗೆ ಶೇವಿಂಗ್, ಫೇಷಿಯಲ್‌, ಹೇರ್‌ ಕಲರ್, ಮಸಾಜ್‌‌ ಮಾಡಿಸಿಕೊಳ್ಳುತ್ತಿದ್ದರು. ಈಗ, ಹೇರ್‌ ಕಟಿಂಗ್‌ ಮಾತ್ರ ಮಾಡಿಸಿಕೊಳ್ಳುತ್ತಾರೆ. ಕಟಿಂಗ್‌ಗೆ ₹70 ಇದ್ದರೆ, ಕೂದಲಿಗೆ ಬಣ್ಣ ಹಚ್ಚಲು, ಫೇಷಿಯಲ್‌, ಮಸಾಜ್‌ ಎಲ್ಲ ಸೇರಿ ₹300ರಿಂದ ₹400 ಆಗುತ್ತಿತ್ತು. ಗ್ರಾಹಕರು ಕಡಿಮೆ ಇದ್ದರೂ ಈ ಎಲ್ಲ ಸೇವೆ ‍ಪಡೆದುಕೊಂಡಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಅವರು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಸುಮಾರು 3.5 ಲಕ್ಷ ಜನ ಕ್ಷೌರಿಕರಿದ್ದಾರೆ. ಈ ಪೈಕಿ, ಒಂದು ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ಇದ್ದಾರೆ. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕರು ಬಡವರು. ಗ್ರಾಹಕರಿಲ್ಲದೆ ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದು ರಾಜ್ಯ ಸವಿತಾ ಸಮಾಜ ಸಂಘದ ಸಂಚಾಲಕ ಎಂ.ಎಸ್. ಮುತ್ತುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಡಿಗೆ ಸಮಸ್ಯೆ

‘₹50ಲಕ್ಷದಿಂದ ₹60 ಲಕ್ಷದವರೆಗೆ ಬಂಡವಾಳ ಹೂಡಿ ಸ್ಪಾಗಳನ್ನು ಪ್ರಾರಂಭಿಸಿದ್ದೇವೆ. ತಿಂಗಳ ಬಾಡಿಗೆಯೇ ₹70 ಸಾವಿರದಿಂದ ₹80 ಸಾವಿರದವರೆಗೆ ಬರುತ್ತದೆ. ಬೇರೆ ರಾಜ್ಯಗಳ ಕೆಲಸಗಾರರು ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ಈಗ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ಸ್ಪಾದ ಮಾಲೀಕರೊಬ್ಬರು ಹೇಳಿದರು.

‘ಮಸಾಜ್‌ ಎಲ್ಲ ಮಾಡಬೇಕಾಗಿರುವುದರಿಂದ ಬರಿಗೈಯಿಂದಲೇ ಗ್ರಾಹಕರ ಮುಖ–ಮೈ ಮುಟ್ಟಬೇಕಾಗುತ್ತದೆ. ಸೋಂಕು ಹರಡುವ ಭೀತಿಯಿಂದ ಕೆಲವರು ಮಸಾಜ್‌ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕಟಿಂಗ್‌ ಮಾಡುವಾಗ ಮೇಲೆ ಹಾಕುವ ಬಟ್ಟೆಯನ್ನು ಬದಲಿಸಬೇಕಾಗುತ್ತದೆ. ಬಳಸಿದ ಬಟ್ಟೆಯನ್ನು ಹಾಕಲು ಕೆಲವು ಗ್ರಾಹಕರು ಒಪ್ಪುವುದಿಲ್ಲ. ಹೀಗಾಗಿ, ಬಳಸಿ ಬಿಸಾಡುವಂತಹ ಬಟ್ಟೆಗಳನ್ನು ಹಾಕುತ್ತೇವೆ. ಇದಕ್ಕೆ ₹100 ಹೆಚ್ಚು ಕೊಡಬೇಕಾಗುತ್ತದೆ. ಕೆಲವು ಗ್ರಾಹಕರು ಇದಕ್ಕೆ ಒಪ್ಪಿದರೆ, ಕೆಲವರು ಹೆಚ್ಚು ಹಣ ಕೊಡಲು ಒಪ್ಪುವುದಿಲ್ಲ’ ಎಂದು ಅವರು ಹೇಳಿದರು.

ಬ್ಯೂಟಿಪಾರ್ಲರ್‌: ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ

‘ಲಾಕ್‌ಡೌನ್‌ ಸಡಿಲಗೊಂಡ ನಂತರ ಗ್ರಾಹಕರು ಕ್ರಮೇಣವಾಗಿ ಬರುತ್ತಿದ್ದಾರೆ. ಆದರೆ, ಈ ಮೊದಲಿನಷ್ಟು ಜನ ಇಲ್ಲ. ಮಹಿಳೆಯರಲ್ಲಿ ಆತಂಕ ಇನ್ನೂ ದೂರವಾಗಿಲ್ಲ. ಹೀಗಾಗಿ, ಬ್ಯೂಟಿಪಾರ್ಲರ್‌ನಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದೇವೆ’ ಎನ್ನುತ್ತಾರೆ ಬ್ಯೂಟಿಪಾರ್ಲರ್‌ ಒಂದರ ಮುಖ್ಯಸ್ಥೆ, ಉದ್ಯಮಿ ಉಷಾ ಪ್ರಸಾದ್.

‘ಒಬ್ಬರಿಗೆ ಸೇವೆ ನೀಡಿದ ನಂತರವೇ ಮತ್ತೊಬ್ಬರಿಗೆ ಸೇವೆ ಒದಗಿಸುತ್ತಿದ್ದೇವೆ. ಪ್ರತಿ ಬಾರಿಯೂ ಸ್ಥಳವನ್ನು ಸೋಂಕು ಮುಕ್ತಗೊಳಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಗ್ರಾಹಕರ ಸಂಖ್ಯೆ ಕಡಿಮೆ ಇರುವುದರಿಂದ ನಮ್ಮಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದೇವೆ. ಮೊದಲು ಒಂದು ಬ್ಯೂಟಿಪಾರ್ಲರ್‌ನಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದರು, ಈಗ ನಾಲ್ಕು ಜನರನ್ನು ಮಾತ್ರ ಕರೆಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘₹5 ಸಾವಿರ ನೆರವು ಸಿಕ್ಕಿಲ್ಲ’

‘ಕ್ಷೌರಿಕರಿಗೆ ಸರ್ಕಾರ ₹5 ಸಾವಿರ ನೆರವು ನೀಡುವುದಾಗಿ ಘೋಷಿಸಿದಾಗ ಸಂತೋಷವಾಗಿತ್ತು. ಆದರೆ, ಈವರೆಗೆ ಈ ನೆರವು ಯಾರಿಗೂ ಸಿಕ್ಕಿಲ್ಲ’ ಎಂದು ಮುತ್ತುರಾಜ್‌ ಹೇಳಿದರು.

‘ಯಾವ ಮಾನದಂಡದ ಆಧಾರದ ಮೇಲೆ ನೆರವು ನೀಡಲಾಗುತ್ತದೆ. ಇದನ್ನು ಪಡೆಯಲು ಯಾವ ದಾಖಲೆ ನೀಡಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯೂ ಇಲ್ಲ. ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರ ತಕ್ಷಣವೇ ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದು ಅವರು ಮನವಿ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.