ADVERTISEMENT

ಕೊರೊನಾ: ಸಂದೇಹ ನಿವಾರಣೆಗೆ ಸಹಾಯವಾಣಿ

ಹೆಚ್ಚುತ್ತಿದೆ ಕೊರೊನಾ ಭೀತಿ: 797 ಮಂದಿಯಿಂದ ಕರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 19:03 IST
Last Updated 4 ಫೆಬ್ರುವರಿ 2020, 19:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ವೈರಸ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ವಿಚಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈವರೆಗೆ 797 ಮಂದಿ ಕರೆ ಮಾಡಿ ತಮ್ಮ ಸಂದೇಹಗಳನ್ನು ದೂರ ಮಾಡಿಕೊಂಡಿದ್ದಾರೆ.

ರೋಗ ಲಕ್ಷಣಗಳ ಬಗ್ಗೆ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ, ರೋಗ ತಪಾಸಣೆಯ ಬಗ್ಗೆ, ಈ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ನೆರೆರಾಜ್ಯ ಕೇರಳದಲ್ಲೂ ಮೂವರ ದೇಹದಲ್ಲಿ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಈ ಸೋಂಕಿನ ಬಗ್ಗೆ ಆತಂಕ ಇನ್ನಷ್ಟು ಹೆಚ್ಚಿದ್ದು, ನಮ್ಮ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳವಾರ 5 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ(ಎನ್‌ಐವಿ) ಬಂದಿದ್ದು, ಶಂಕಿತರಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ.

ADVERTISEMENT

ರಾಜ್ಯದಲ್ಲಿ ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿರುವವರ ರಕ್ತದ ಮಾದರಿಯನ್ನು ಪುಣೆಯ ಎನ್ಐವಿಗೆ ಕಳುಹಿಸಲಾಗುತ್ತಿದೆ. ಇದುವರೆಗೆ 44 ಮಂದಿಯ ರಕ್ತದ ಮಾದರಿಗಳಲ್ಲಿ ಯಾವುದೇ ಕೊರೊನಾ ವೈರಸ್‌ ಪತ್ತೆಯಾಗಿಲ್ಲ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಗೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ಪ್ರಾಂಗಣದಲ್ಲಿರುವ ಎನ್‌ಐವಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಮೊದಲ ಬ್ಯಾಚ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾದ 11 ಮಂದಿಯ ವರದಿ ಬಂದಿದ್ದು, ಯಾರಿಗೂ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.