ಬೆಂಗಳೂರು: 'ಗೌರವಾನ್ವಿತರೇ, ಈ ವರದಿ ನಿಮ್ಮ ಕಣ್ಣು ತೆರೆಸದಿದ್ದರೆ ಇನ್ನೇನು ಮಾಡಿದರೂ ನಿಮಗೆ ವಾಸ್ತವ ಅರ್ಥವಾಗದು. ಈ ವರದಿಯಲ್ಲಿ ಪ್ರಸ್ತಾಪವಾಗಿರುವ ತಂದೆಯ ಸ್ಥಾನದಲ್ಲಿ ನಿಮ್ಮ ಅಪ್ಪನನ್ನು ಊಹಿಸಿಕೊಳ್ಳಿ...'
www.prajavani.net ಜಾಲತಾಣದಲ್ಲಿ ಪ್ರಕಟವಾಗಿದ್ದ ಪ್ರತ್ಯಕ್ಷ ಅನುಭವ | ಕೋವಿಡ್ ಪರೀಕ್ಷೆಗೆ ಹೋದವರು ಸೋಂಕಿನ ಭೀತಿಯೊಂದಿಗೆ ಬಂದರು!ಸುದೀರ್ಘ ವರದಿ ಓದಿದ ಹಲವಾರು ಓದುಗರು ಮೇಲಿನಂತೆಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ, ಆರೋಗ್ಯ ಸಚಿವರು, ಪ್ರಧಾನಿ ಕಾರ್ಯಾಲಯ, ವೈದ್ಯಕೀಯ ಶಿಕ್ಷಣ ಸಚಿವರೂ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಹಲವರು ಈ ಲೇಖನವನ್ನು ರಿಟ್ವೀಟ್, ಶೇರ್ ಮಾಡಿದ್ದಾರೆ.
'ಇದು ನಿಜವಾದ ವ್ಯವಸ್ಥೆ. ಹೀಗಿದ್ದಾಗ ಜೀವ ಉಳಿಸಿಕೊಳ್ಳುವ ಪ್ರಕ್ರಿಯೆ ಹೇಗೆ. ಒಂದು ಕಡೆ ಖಾಸಗಿಯಾಗಿ ಚಿಕಿತ್ಸೆ ಪಡೆಯಲು ಸಾಮಾನ್ಯರಿಗೆ ಅಸಾಧ್ಯ, ಮತ್ತೊಂದು ಕಡೆ ಸರ್ಕಾರದಿಂದಲೇ ಉಚಿತ ಸೋಂಕು' ಎಂದು ಶ್ರೀನಿಧಿ ಶ್ರೀಕರ್ ವರದಿಯ ಲಿಂಕ್ನೊಂದಿಗೆ ಬೇಸರವನ್ನೂ ಹಂಚಿಕೊಂಡಿದ್ದಾರೆ.
'ಹೀಗಿದೆ ನಮ್ಮ ಸರ್ಕಾರದ ವ್ಯವಸ್ಥೆ' ಎಂದು ಮಹಾಬಲೇಶ್ವರ ಹೆಗಡೆ ಎನ್ನುವವರು ವರದಿಯ ಲಿಂಕ್ ಟ್ವೀಟ್ ಮಾಡಿದ್ದಾರೆ.
ವರದಿಯ ಲಿಂಕ್ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕೋವಿಡ್ ಅನಿಯಂತ್ರಿತವಾಗಿ ಯಾಕೆ ಹರಡುತ್ತಿದೆ ಎನ್ನುವುದಕ್ಕೆ ಈ ವರದಿಯಲ್ಲಿನ ತಂದೆ-ಮಗನ ಹೃದಯವಿದ್ರಾವಕ ಅನುಭವವೇ ಹೇಳುತ್ತಿದೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕಚೇರಿಗೆ ತಮ್ಮ ಟ್ವೀಟ್ ಟ್ಯಾಗ್ ಮಾಡಿರುವ ಅವರು, 'ಯಡಿಯೂರಪ್ಪ ಅವರೇ ಜಾಗಟೆ ಬಡಿದು ಶಹಬಾಸ್ಗಿರಿ ತಗೊಂಡಿದ್ದು ಸಾಕು. ಈಗಲಾದರೂ ಎಚ್ಚೆತ್ತುಕೊಳ್ಳಿ, ಜನರನ್ನು ಉಳಿಸಿ' ಎಂದು ಹೇಳಿದ್ದಾರೆ.
'ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಕಡೆ ದೈಹಿಕ ಅಂತರ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಸ್ಪತ್ರೆಗಳು ಸೋಂಕು ಹುಟ್ಟುಹಾಕುವ ಕೇಂದ್ರಗಳಾಗಬಾರದು' ಎಂಬ ಆಶಯದೊಂದಿಗೆ ರಾಕೇಶ್ ಈ ವರದಿಯ ಲಿಂಕ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.