ಬೆಂಗಳೂರು: ರಾಜ್ಯದಲ್ಲಿ ‘ಕೋವಿಡ್–19’ ಸೋಂಕು ಪ್ರಕರಣಗಳು ಕಂಡುಬರುತ್ತಿರುವುದರಿಂದ ಪೊಲೀಸ್ ಠಾಣೆಗಳಲ್ಲೂ ಆತಂಕ ಶುರುವಾಗಿದೆ. ನಗರದ ಠಾಣೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಠಾಣೆಗೆ ಬರುವವರನ್ನು ಸೋಂಕು ನಿವಾರಕ ದ್ರಾವಣದಿಂದ (ಸ್ಯಾನಿಟೈಸರ್) ಕೈ ತೊಳೆದು ಒಳಗೆ ಬರುವಂತೆ ಸೂಚಿಸಲಾಗುಗುತ್ತಿದೆ.
ಇದೇ ಕಾರಣಕ್ಕೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ಠಾಣೆಗೆ ಯಾರೇ ಬಂದರೂ ಸ್ಯಾನಿಟೈಸರ್ನಿಂದ ಕೈ ತೊಳೆಸಿ ಒಳಗೆ ಕರೆದುಕೊಳ್ಳುತ್ತಿದ್ದೇವೆ. ಠಾಣಾ ಸಿಬ್ಬಂದಿಗೂ ಸಾಬೂನು ಹಾಗೂ ಸ್ಯಾನಿಟೈಸರ್ ಬಳಸಿ ಆಗಾಗ ಕೈ ತೊಳೆದುಕೊಳ್ಳುವಂತೆ ಸಲಹೆ ನೀಡಿದ್ದೇವೆ. ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಪ್ರತಿಯೊಬ್ಬ ಸಿಬ್ಬಂದಿಯೂ ಮುಖಗವಸು (ಮಾಸ್ಕ್) ಧರಿಸಬೇಕು ಎಂದು ಸೂಚನೆ ನೀಡಿದ್ದೇವೆ’ ಎಂದು ಇನ್ಸ್ಪೆಕ್ಟರ್ ಒಬ್ಬರು ತಿಳಿಸಿದರು.
‘ಯಾರಿಗಾದರೂ ಕೋವಿಡ್–19 ಲಕ್ಷಣಗಳು ಕಂಡುಬಂದರೆ 104 ಸಂಖ್ಯೆಗೆ ಕರೆ ಮಾಡುವಂತೆಯೂ ಸೂಚಿಸಿದ್ದೇವೆ’ ಎಂದರು.
ಕೈದಿಗಳ ಭೇಟಿಗೆ ನಿರ್ಬಂಧ
‘ಕೋವಿಡ್–19’ ಹಿನ್ನೆಲೆಯಲ್ಲಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಸಂಬಂಧಿಕರು ಭೇಟಿ ಆಗಬಾರದು ಎಂದು ನಿರ್ಬಂಧ ವಿಧಿಸಲಾಗಿದೆ.
ಕೈದಿಗಳನ್ನು ಮಾತನಾಡಿಸಲು ಸಂಬಂಧಿಕರು ಹಾಗೂ ಸ್ನೇಹಿತರು ಬರುತ್ತಿದ್ದರು. ಇಂಥ ಭೇಟಿ ವೇಳೆ ವೈರಸ್ ಹರಡುವ ಸಂಭವ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಅವರ ಭೇಟಿಗೆ ಅವಕಾಶ ನೀಡದಿರಲು ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಜೈಲಿನಲ್ಲಿ ನಿಗದಿತ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಕೈದಿಗಳಿದ್ದಾರೆ. ಯಾರಿಗಾದರೂ ಒಬ್ಬರಿಗೆ ವೈರಸ್ ತಗುಲಿದರೂ ಅಪಾಯ ಹೆಚ್ಚು. ಹೀಗಾಗಿ ಪ್ರತಿಯೊಬ್ಬ ಕೈದಿಗೂ ಮಾಸ್ಕ್ಗಳನ್ನು ವಿತರಿಸಿ, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಿತ್ಯವೂ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.