ADVERTISEMENT

ದೇಶಕ್ಕೆ ಸಮರ್ಥ ಭಾಷಾ ನೀತಿಯ ಅಗತ್ಯ: ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 20:04 IST
Last Updated 19 ಫೆಬ್ರುವರಿ 2024, 20:04 IST

ನವದೆಹಲಿ: ‘ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ತಾಯ್ನುಡಿಗಳಿದ್ದು, ಈ ಭಾಷೆಗಳ ರಕ್ಷಣೆ ಹಾಗೂ ಸಬಲೀಕರಣ ಅಗತ್ಯ’ ಎಂದು ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಅಭಿಪ್ರಾಯಪಟ್ಟರು. 

ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಲ್ಲಿನ ‍ಪ್ರಗತಿ ಮೈದಾನದಲ್ಲಿ ಸಂಘಟಿಸಿದ ವಿಶ್ವ ಪುಸ್ತಕ ಮೇಳದಲ್ಲಿ ಕರ್ನಾಟಕದ ಬಹುಭಾಷಿಕತೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮೈಸೂರಿನ ಲೇಖಕಿ ಡಾ. ಸುಕನ್ಯಾ ಕನಾರಳ್ಳಿ ಅವರು ತಾವು ಹುಟ್ಟಿ ಬೆಳೆದ ಬಹುಭಾಷಾ ಪರಿಸರದ ವಿವರಣೆ ನೀಡಿದರು. ಸೃಜನಶೀಲ ಪ್ರಕ್ರಿಯೆಯು ಭಾಷಾ ವೈವಿಧ್ಯಗಳನ್ನು ಒಳಗೊಳ್ಳುವ ಕುರಿತು ಹಾಗೂ ಅವು ಸಾಮಾಜಿಕವಾಗಿ ಬಹುಜನರನ್ನು ಒಳಗೊಳ್ಳುವ ಕುರಿತು ಮಾತನಾಡಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಭಾರತದ ಅನೇಕ ಭಾಷೆಗಳು ಪತನಮುಖಿಯಾಗಿರುವುದನ್ನು ಉದಾಹರಣೆಗಳೊಂದಿಗೆ ವಿವರಿಸಿ, ‘ಈ ಎಲ್ಲ ಭಾಷೆಗಳು ಉಳಿದು ಬೆಳೆಯಬೇಕಾದರೆ ಭಾರತಕ್ಕೊಂದು ಸಮರ್ಥ ಭಾಷಾ ನೀತಿಯ ಅಗತ್ಯ ಇದೆʼ ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಎನ್‌ಬಿಟಿಯು ಸುಮಾರು 60 ಭಾರತೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯ ಮಾಡುತ್ತಿದೆ.  ಪ್ರತಿವರ್ಷ ಇಲ್ಲಿನ ಪ್ರಗತಿ ಮೈದಾನದಲ್ಲಿ ಪುಸ್ತಕ ಮೇಳ ಆಯೋಜಿಸುವ ಜೊತೆಗೆ ವಿವಿಧ ಭಾಷೆಗಳ ಪುಸ್ತಕಗಳ ಕುರಿತು ಚರ್ಚೆ, ಪ್ರಮುಖ ವಿಷಯಗಳ ಕುರಿತ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.