ಬೆಂಗಳೂರು: ‘ಕೊಚ್ಚಾಡಿಯನ್ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಉಂಟಾದ ನಷ್ಟ ತುಂಬಿಕೊಟ್ಟಿಲ್ಲ’ ಎಂಬ ಆರೋಪದ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ನಿರ್ಬಂಧಕ ಆದೇಶ ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಪ್ರಕರಣದಲ್ಲಿ ನಟ ರಜನಿಕಾಂತ್ ಪತ್ನಿ ಲತಾ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ಖುದ್ದು ಹಾಜರಾಗಿ ಜಾಮೀನು ಪಡೆದುಕೊಂಡರು.
‘ನಕಲು ಮಾಡಿದ ಆರೋಪದಡಿಯ ನನ್ನ ವಿರುದ್ಧದ ಆರೋಪಗಳನ್ನು ಕೈ ಬಿಡಬೇಕು’ ಎಂದು ಕೋರಿ ಲತಾ ರಜನಿಕಾಂತ್ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
‘ಈ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶ ಆನಂದ ಕರಿಯಮ್ಮನವರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ₹1 ಲಕ್ಷದ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ₹25 ಸಾವಿರ ನಗದು ಪಾವತಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು’ ಎಂಬ ಷರತ್ತು ವಿಧಿಸಿ ವಿಚಾರಣೆಯನ್ನು 2024ರ ಜನವರಿ 6ಕ್ಕೆ ಮುಂದೂಡಿದರು.
‘2024ರ ಜನವರಿ 6 ಅಥವಾ ಅದಕ್ಕೂ ಮೊದಲು ಲತಾ ರಜನೀಕಾಂತ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು’ ಎಂದು ನ್ಯಾಯಾಲಯ ಇದೇ 2ರಂದು ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.