ADVERTISEMENT

ಬಿಡಿಎ: ಒಂದು ವಾರ ಜನರ ಭೇಟಿಗೆ ಇಲ್ಲ ಅವಕಾಶ

ನ್ಯಾಯಾಲಯದ ಆದೇಶಗಳ ಅನುಪಾಲನಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 21:42 IST
Last Updated 10 ಮಾರ್ಚ್ 2021, 21:42 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಡ್ಡಾಯವಾಗಿ ಜಾರಿಗೆ ತರಲೇಬೇಕಾದ ಆದೇಶಗಳನ್ನು ಹೈಕೋರ್ಟ್‌ ನೀಡಿದೆ. ಇವುಗಳನ್ನು ತುರ್ತಾಗಿ ಜಾರಿಗೊಳಿಸಲು ಬಿಡಿಎ ಇದೇ 15ರಿಂದ 20ರವರೆಗೆ ‘ಹೈಕೋರ್ಟ್‌ ಆದೇಶ ಅನುಪಾಲನಾ ಸಪ್ತಾಹ’ವನ್ನು ಹಮ್ಮಿಕೊಂಡಿದೆ.

ಈ ಸಪ್ತಾಹದ ಅವಧಿಯಲ್ಲಿ ನಿತ್ಯವೂ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಬಿಡಿಎ ಕೇಂದ್ರ ಕಚೇರಿಗೆಸಾರ್ವಜನಿಕರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.ಇ-ಹರಾಜಿನ ಮೂಲಕ ಮಾರಾಟ ಮಾಡಿರುವ ನಿವೇಶನಗಳ ನೊಂದಣಿ ಕಾರ್ಯಗಳೂ ಸೇರಿದಂತೆ ಇತರ ಕಾರ್ಯಗಳನ್ನು ಐದು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗುತ್ತದೆ. ಇವುಗಳ ನೊಂದಣಿಗೆ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಬಿಡಿಎ ತಿಳಿಸಿದೆ.

‘500ಕ್ಕೂ ಅಧಿಕ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಜಾರಿಗೊಳಿಸಲು ಬಾಕಿ ಇದೆ. ನ್ಯಾಯಾಲಯದ ಆದೇಶ ಪಾಲನೆ ಆಗದಿರುವುದನ್ನು ಪ್ರಶ್ನಿಸಿ ಅನೇಕರು ದೂರುದಾರರು ನ್ಯಾಯಾಂಗನಿಂದನೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಆದೇಶ ಜಾರಿ ವಿಳಂಬವಾಗಿದ್ದಕ್ಕೆ ಬಿಡಿಎ ದಂಡ ಪಾವತಿ ಮಾಡಬೇಕಾದ ಪ್ರಮೇಯಗಳೂ ಎದುರಾಗಿವೆ. ಆದೇಶಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನ್ಯಾಯಾಲಯದ ಆದೇಶಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ವಿಶೇಷ ಸಪ್ತಾಹ ಹಮ್ಮಿಕೊಂಡಿದ್ದೇವೆ’ ಎಂದು ಪ್ರಾಧಿಕಾರದ ಆಯುಕ್ತ ಎಚ್‌.ಆರ್‌.ಮಹದೇವ ತಿಳಿಸಿದರು.

ADVERTISEMENT

‘ಅಧಿಕಾರಿಗಳಿಗೆ ಅನ್ಯ ಕಾರ್ಯಗಳನ್ನು ಹಚ್ಚಿದರೆ, ನ್ಯಾಯಾಲಯದ ಆದೇಶಗಳ ಅನುಷ್ಠಾನ ಮತ್ತಷ್ಟು ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಒಂದು ಬಾರಿಗೆ ಸಪ್ತಾಹವನ್ನು ಹಮ್ಮಿಕೊಂಡು ಹೆಚ್ಚಿನ ಆದೇಶಗಳನ್ನು ಜಾರಿಗೊಳಿಸಲಿದ್ದೇವೆ’ ಎಂದರು.

‘ಸಾರ್ವಜನಿಕರ ಹಿತಾದೃಷ್ಟಿಯಿಂದಲೇ ಈ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ. ಈ ಅವಧಿಯಲ್ಲಿ ಇತರ ಸೇವೆಗಳು ಲಭ್ಯ ಇಲ್ಲದೇ ಇರುವುದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಅವರು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.