
ಬೆಂಗಳೂರು: ನಗರದಲ್ಲಿ ರಸ್ತೆಯ ಬದಿ ನೆಟ್ಟಿದ್ದ ನೂರಾರು ಸಸಿಗಳು ದಿನೇ ದಿನೇ ಬೆಳೆಯುತ್ತಿವೆ. ಅವುಗಳ ರಕ್ಷಣೆಗೆ ಹಾಕಿರುವ ‘ರಕ್ಷಾ ಕವಚ’ವನ್ನು (ಕಬ್ಬಿಣದ ತಂತಿಗಳ ಜಾಲರಿ) ತೆರವುಗೊಳಿಸದೇ ಇರುವುದರಿಂದ ಗಿಡಗಳ ಬೆಳವಣಿಗೆಗೆ ಕವಚವೇ ಕಂಟಕವಾಗಿ ಪರಿಣಮಿಸಿವೆ.
ಸಸಿ ನೆಟ್ಟ ಮೇಲೆ ಬೇರು ಗಟ್ಟಿಯಾಗಿ, ಕೊಂಬೆ ಹರಡಿ, ಹತ್ತು ಅಡಿ ಎತ್ತರಕ್ಕೆ ಬೆಳೆಯುವವರೆಗೆ ‘ಜಾಲರಿ’ ಅಗತ್ಯವಿದೆ. ಗಿಡ ಬೆಳೆದ ನಂತರ ಅದನ್ನು ತೆರವು ಮಾಡಬೇಕು. ಆದರೆ, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಈ ಕಾರ್ಯವನ್ನು ಕೈಗೊಳ್ಳದಿರುವುದರಿಂದ ‘ಜಾಲರಿ’ ಅಳವಡಿಸಿದ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ.
‘ಗಿಡ ಹತ್ತು ಅಡಿ ಬೆಳೆಯಲು ಕನಿಷ್ಠ 3 ವರ್ಷದಿಂದ 5 ವರ್ಷದವರೆಗೂ ಅವಧಿ ಬೇಕಾಗುತ್ತದೆ. ಕೆಲವು ಸಸಿಗಳು ವೇಗವಾಗಿ ಬೆಳೆದರೆ, ಇನ್ನೂ ಕೆಲವು ನಿಧಾನಗತಿಯಲ್ಲಿ ಬೆಳೆಯುತ್ತವೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ತಿಳಿಸಿದರು.
‘ಕಾಂಡ ದಪ್ಪವಾಗುವಾಗ ಸಸಿಗೆ ಯಾವುದೇ ಅಡ್ಡಿ ಇರಬಾರದು. ಆದರೆ, ಜಾಲರಿ ಅಳವಡಿಸಿದ ಕಡೆಗಳಲ್ಲಿ ಕಬ್ಬಿಣದ ತಂತಿಗಳ ಮಧ್ಯೆ ಗಿಡಗಳು ಸಿಲುಕಿಕೊಂಡಿವೆ. ತಂತಿ ತಾಗಿದ ಭಾಗಗಳಲ್ಲಿ ಗಿಡಗಳು ಕೊಳೆಯುತ್ತವೆ. ಹೀಗೆ ‘ಜಾಲರಿ’ ತಂದಿಡುವ ಅವಾಂತ ರಗಳಿಂದ ಗಿಡಗಳು ಸರಾಗವಾಗಿ ಬೆಳೆಯಲಾರವು’ ಎಂದು ಹೇಳಿದರು.
‘ಸಸಿಗೆ ನೀರು, ಗೊಬ್ಬರ ಹಾಕುವುದಷ್ಟೇ ಅಲ್ಲ. ಅವುಗಳ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾಲರಿ ಅಳವ ಡಿಸಿದ ಕಡೆಗಳನ್ನು ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಈಗಾ ಗಲೇ ಮನವಿ ಸಲ್ಲಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯದ
ನಂತರ ತೆರವುಗೊಳಿಸುವುದಕ್ಕಾಗಿ ಟೆಂಡರ್ ಕರೆಯುವುದಾಗಿ ಅಧಿಕಾರಿಗಳು ತಿಳಿಸಿ ದ್ದಾರೆ’ ಎಂದೂ ಅವರು ಹೇಳಿದರು.
ಗಿಡಗಳಿಗೆ ಅಳವಡಿಸಿರುವ ಜಾಲರಿ ಯನ್ನು ಕೆಲವೆಡೆ ಸಾರ್ವಜನಿಕರು ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಜಾಲರಿಯೊಳಗೆ ಬರೀ ಪ್ಲಾಸ್ಟಿಕ್ ತುಂಬಿದ್ದಾರೆ. ಗುಟ್ಕಾ, ಪಾನ್, ತಂಬಾಕು ಪಾಕೀಟ್ಗಳನ್ನು ಪಾದಚಾರಿಗಳು ಮರದ ಬುಡಕ್ಕೆ ಎಸೆಯುತ್ತಾರೆ. ಇದೂ ಕೂಡ ಗಿಡ ಬೆಳೆವಣಿಗೆಗೆ
ಸಮಸ್ಯೆಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.