ಬೆಂಗಳೂರು: ಹಗಲು ರಾತ್ರಿ ಎನ್ನದೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲೆ ಭಾನುವಾರ ಹೂಮಳೆ ಸುರಿಯಿತು. ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಮಾಂಡ್ ಆಸ್ಪತ್ರೆಯ ಆವರಣ ಈ ಕ್ಷಣಕ್ಕೆ ಸಾಕ್ಷಿಯಾಯಿತು.
ಭಾರತೀಯ ವಾಯುಸೇನೆಯುಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಿ,ಕೊರೊನಾ ಯೋಧರಿಗೆ ಗೌರವ ಸಲ್ಲಿಸಿತು. ಬೆಳಿಗ್ಗೆ 10.30ರ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ, ಹೆಲಿಕಾಪ್ಟರ್ ಬರುತ್ತಿದ್ದಂತೆ ಪುಳಕಿತಗೊಂಡರು. ಹೂವುಗಳು ಆಗಸದಿಂದ ಬೀಳುತ್ತಿದ್ದಂತೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕೆಲವರು ಆಗಸದೆಡೆಗೆ ಕೈಗಳನ್ನು ಬೀಸುವ ಮೂಲಕ ಧನ್ಯವಾದ ಅರ್ಪಿಸಿದರು.
ಇದೇ ವೇಳೆ ವಾಯುಸೇನೆಯ ವಾದ್ಯ ತಂಡವೂ ಗೌರವ ನಮನ ಸಲ್ಲಿಸಿತು. ಇದರಿಂದಾಗಿ ಆತಂಕದಿಂದ ಸೇವೆ ಸಲ್ಲಿಸುತ್ತಿದ್ದವರ ಮುಖದಲ್ಲಿ ಸಾರ್ಥಕತೆಯ ಭಾವ ಮೂಡಿತ್ತು. ಕೆಲವರು ಈ ಕ್ಷಣವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿಯೂ ಸೆರೆ ಹಿಡಿದುಕೊಂಡರು.
ವಾಯುಸೇನೆಯುಕಮಾಂಡ್ ಆಸ್ಪತ್ರೆಯ ಕೊರೊನಾ ಯೋಧರ ಮೇಲೂ ಪುಷ್ಪ ಸುರಿಯುವ ಮೂಲಕ ಗೌರವ ಸೂಚಿಸಿತು. 8 ನಿಮಿಷಗಳ ಕಾಲ ಅಲ್ಲಿ ಹೂವುಗಳನ್ನು ಹೆಲಿಕಾಪ್ಟರ್ ಮೂಲಕ ಹಾಕಲಾಯಿತು.
‘ಈ ಗೌರವದಿಂದ ಜೀವನ ಸಾರ್ಥಕ ಎಂಬ ಭಾವನೆ ಮೂಡಿದೆ. ಅಷ್ಟೇ ಅಲ್ಲ, ನಾವು ಮಾಡುತ್ತಿರುವುದು ಶ್ರೇಷ್ಠವಾದ ಕೆಲಸ ಎನ್ನುವುದು ಮನವರಿಕೆಯಾಗಿದೆ. ಕೊರೊನಾ ಸೋಂಕಿನ ಹೋರಾಟದಲ್ಲಿ ನಾವು ಜಯಿಸುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕಿ ಹೇಮಾವತಿ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತದ ಕೇಂದ್ರ ಸ್ಥಾನವಾದ ವಿಧಾನ ಸೌಧದ ಮೇಲೂ ಭಾರತೀಯ ವಾಯುಸೇನೆಯು ಪುಷ್ಪವೃಷ್ಟಿ ನಡೆಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.