ADVERTISEMENT

ಸಂಪರ್ಕಕ್ಕೆ ಸಿಗದ 3 ಸಾವಿರ ಸೋಂಕಿತರು: ಆರ್‌.ಅಶೋಕ

ಬಾಗಲಗುಂಟೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 21:12 IST
Last Updated 28 ಏಪ್ರಿಲ್ 2021, 21:12 IST
ಕೋವಿಡ್ ಆರೈಕೆ ಕೇಂದ್ರವನ್ನು ಕಂದಾಯ ಸಚಿವ ಆರ್. ಅಶೋಕ ಉದ್ಘಾಟಿಸಿ ಪರಿಶೀಲಿಸಿದರು. ಶಾಸಕ ಆರ್. ಮಂಜುನಾಥ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ದಾಸರಹಳ್ಳಿ ವಲಯದ ಆಯುಕ್ತ ರವೀಂದ್ರ, ಜಂಟಿ ಆಯುಕ್ತ ನರಸಿಂಹಮೂರ್ತಿ ಇದ್ದರು.
ಕೋವಿಡ್ ಆರೈಕೆ ಕೇಂದ್ರವನ್ನು ಕಂದಾಯ ಸಚಿವ ಆರ್. ಅಶೋಕ ಉದ್ಘಾಟಿಸಿ ಪರಿಶೀಲಿಸಿದರು. ಶಾಸಕ ಆರ್. ಮಂಜುನಾಥ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ದಾಸರಹಳ್ಳಿ ವಲಯದ ಆಯುಕ್ತ ರವೀಂದ್ರ, ಜಂಟಿ ಆಯುಕ್ತ ನರಸಿಂಹಮೂರ್ತಿ ಇದ್ದರು.   

ಪೀಣ್ಯದಾಸರಹಳ್ಳಿ: ’ಕೋವಿಡ್ ದೃಢಪಟ್ಟವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದು, ಅಂಥವರನ್ನ ಹುಡುಕುವುದು ಮತ್ತು ಸಂಪರ್ಕಿಸುವುದು ಕಷ್ಟವಾಗುತ್ತಿದೆ. ಸುಮಾರು 3 ಸಾವಿರ ಜನರು ಹೀಗೆ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡಿದ್ದಾರೆ‘ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಬಾಗಲಗುಂಟೆಯ ಮಂಜುನಾಥನಗರದಲ್ಲಿರುವ ಕಾರ್ಮಿಕ ಸಮುದಾಯ ಭವನದಲ್ಲಿ ಬಿಬಿಎಂಪಿ ನಿರ್ಮಿಸಿರುವ 130 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.

’ಹೀಗೆ ಸಂಪರ್ಕಕ್ಕೆ ಸಿಗದವರ ಟ್ರಾಕಿಂಗ್ ಅನ್ನು ಪೊಲೀಸರು ಮಾಡುತ್ತಿದ್ದಾರೆ. ತೀರಾ ಉಸಿರಾಟದ ಸಮಸ್ಯೆ ಆದಾಗ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಬೇಕೆಂದು ಬರುತ್ತಿದ್ದಾರೆ. ಮುಂಚಿತವಾಗಿಯೇ ಕೋವಿಡ್ ಪಾಸಿಟಿವ್ ಎಂದು ತಿಳಿದ ತಕ್ಷಣ ಐಸೋಲೇಟ್ ಆಗಿ ಔಷಧ, ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡಾಗ ಕೋವಿಡ್ ಸೋಂಕು ಹರಡುವುದನ್ನು ತಡೆಯಬಹುದಾಗಿದೆ‘ ಎಂದರು.

ADVERTISEMENT

'ಈ ಕೇಂದ್ರದಲ್ಲಿ 130 ಹಾಸಿಗೆಗಳ ವ್ಯವಸ್ಥೆ ಇದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಅತ್ಯುತ್ತಮ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳು, ಊಟದ ವ್ಯವಸ್ಥೆ ಇರುತ್ತದೆ' ಎಂದು ಹೇಳಿದರು.

'ಸ್ಥಳೀಯ ಶಾಸಕ ಮಂಜುನಾಥ್ ಅವರು 20 ಐಸಿಯು ಬೆಡ್ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ಅದನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ‘ ಎಂದರು.

ಶಾಸಕ ಆರ್.ಮಂಜುನಾಥ್ 'ಈ ಭಾಗದಲ್ಲಿ ಕಾರ್ಮಿಕರು ಹಾಗೂ ಮಧ್ಯಮವರ್ಗ ಹೆಚ್ಚಾಗಿ ವಾಸಿಸುತ್ತಿದ್ದು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುವ ಮೂಲಕ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿ ನೋಡಿಕೊಳ್ಳಬೇಕು'ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.