ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯದಲ್ಲಿನ 40,159 ಕ್ಷಯ ರೋಗಿಗಳಲ್ಲಿ ಈ ವರ್ಷ 309 ಮಂದಿ ಕೋವಿಡ್ ಪೀಡಿತರಾಗಿರುವುದನ್ನು ಪತ್ತೆ ಮಾಡಿದೆ.
ಕೋವಿಡ್ನಿಂದ ಚೇತರಿಸಿಕೊಂಡ ಕೆಲವರಲ್ಲಿ ಕೂಡ ಕ್ಷಯ ರೋಗ ಕಾಣಿಸಿಕೊಳ್ಳುತ್ತಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಮೂರು ಜಿಲ್ಲೆಗಳಲ್ಲಿ 24 ಪ್ರಕರಣಗಳು ಈಗಾಗಲೇ ಖಚಿತಪಟ್ಟಿವೆ. ಇಲಾಖೆಯು ಕೋವಿಡ್ನಿಂದ ಚೇತರಿಸಿಕೊಂಡವರನ್ನು ಪರೀಕ್ಷಿಸಲು ಇದೇ 16ರಿಂದ 31ರವರೆಗೆ ರಾಜ್ಯದಾದ್ಯಂತ 15 ದಿನಗಳ ಕ್ಷಯ ರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಂಡಿದೆ.
ಮೈಸೂರಿನಲ್ಲಿ 12 ಮಂದಿ, ಕೊಡಗಿನಲ್ಲಿ 7 ಮಂದಿ ಹಾಗೂ ಚಾಮರಾಜನಗರದಲ್ಲಿ 5 ಮಂದಿಗೆ ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ಕ್ಷಯ ರೋಗ ಕಾಣಿಸಿಕೊಂಡಿದೆ. ಕೊಪ್ಪಳದಲ್ಲಿ 6 ಶಂಕಿತ ಪ್ರಕರಣಗಳು ವರದಿಯಾಗಿವೆ.
‘ಕೊರೊನಾ ಮತ್ತು ಕ್ಷಯ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ಸಾಮ್ಯತೆಯಿದೆ. ಆದ್ದರಿಂದ ಕೋವಿಡ್ನಿಂದ ಚೇತರಿಸಿಕೊಂಡವರಿಗೆ ಪರೀಕ್ಷೆ ಮಾಡಲಾಗುತ್ತದೆ. ಕ್ಷಯ ರೋಗ ತಗಲಿರುವುದು ಖಚಿತಪಟ್ಟಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಈ ತಪಾಸಣೆ ಕಾರ್ಯಕ್ಕೆ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತದೆ’ ಆರೋಗ್ಯ ಇಲಾಖೆ (ಟಿಬಿ ವಿಭಾಗ) ಜಂಟಿ ನಿದೇರ್ಶಕ ಡಾ. ರಮೇಶ್ ರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.