ಬೆಂಗಳೂರು: ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷ ಭಾನುವಾರ ಬಿಡುಗಡೆ ಆಗಿದ್ದು, ಅವರನ್ನು ಬೆಂಬಲಿಗರು ಆಸ್ಪತ್ರೆಯಿಂದ ಮನೆಯವರೆಗೂ ಮೆರವಣಿಗೆ ಮೂಲಕ ಕರೆದೊಯ್ದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಬಿಡುಗಡೆ ಮಾಹಿತಿ ತಿಳಿದಿದ್ದ ಬೆಂಬಲಿಗರು 50ಕ್ಕೂ ಹೆಚ್ಚು ಬೈಕ್ ಹಾಗೂ ಕಾರುಗಳಲ್ಲಿ ಆಸ್ಪತ್ರೆಗೆ ಬಂದಿದ್ದರು. ಇಮ್ರಾನ್ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಘೋಷಣೆ ಕೂಗಿ ಸ್ವಾಗತಿಸಿದರು. ನಂತರ, ಆಸ್ಪತ್ರೆಯಿಂದಲೇ ಮನೆಯವರೆಗೂಮೆರವಣಿಗೆ ನಡೆಸಿದರು. ರಸ್ತೆಯಲ್ಲಿದ್ದ ವರನಟ ರಾಜ್ಕುಮಾರ್ ಅವರ ಪುತ್ಥಳಿಗೆ ಇಮ್ರಾನ್ ಮಾಲಾರ್ಪಣೆ ಮಾಡಿದರು.
ಮೆರವಣಿಗೆಯಲ್ಲಿ ಒಂದೇ ಬೈಕ್ನಲ್ಲಿ ಮೂವರು ಸಂಚರಿಸುತ್ತಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಹೋಂ ಕ್ವಾರಂಟೈನ್ನಲ್ಲಿರಬೇಕಾದ ವ್ಯಕ್ತಿಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಸಿರಸಿ ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು. ಮೆರವಣಿಗೆ ಕಂಡ ಸ್ಥಳೀಯರಲ್ಲೂ ಆತಂಕ ಉಂಟಾಗಿತ್ತು.
ಮೆರವಣಿಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಹೋಗಿ ಇಮ್ರಾನ್ ಪಾಷ ಅವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕಾರಾಗೃಹದ ಸೆಲ್ನಲ್ಲಿ ಅವರನ್ನು ಇರಿಸಿರುವ ಮಾಹಿತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.