ಬೆಂಗಳೂರು: ‘ಕೋವಿಡ್ ನಿಯಂತ್ರಣಕ್ಕಾಗಿ ಮತ್ತೆ ಜಾರಿ ಮಾಡಿರುವ ರಾತ್ರಿ ವೇಳೆಯ ಕರ್ಫ್ಯೂನಿಂದ ಕೈಗಾರಿಕೆಗಳು ಹಾಗೂ ಅಲ್ಲಿನ ಕೆಲಸಗಾರರಿಗೆ ತೊಂದರೆಯಾಗಬಾರದು’ ಎಂದುಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಮನವಿ ಮಾಡಿದ್ದಾರೆ.
‘ತೀವ್ರಗೊಳ್ಳುತ್ತಿರುವ ಕೋವಿಡ್ ತಡೆಗಟ್ಟಲು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಏ.10ರಿಂದ 20ರವರೆಗೆ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ವೇಳೆ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯ ಕೆಲಸಗಳು ನಡೆಯುವುದರಿಂದ ಕೆಲಸಗಳಿಗೆಕರ್ಫ್ಯೂದಿಂದ ತೊಂದರೆಯಾಗಬಾರದು’ ಎಂದು ತಿಳಿಸಿದ್ದಾರೆ.
‘ಕಳೆದ ವರ್ಷದ ಲಾಕ್ಡೌನ್ನಿಂದ ಕೈಗಾರಿಕೆಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿವೆ. ಈಗ ಕೈಗಾರಿಕೆಗಳ ಮೇಲೆ ಮತ್ತೆ ಅತಿಯಾದ ನಿಯಂತ್ರಣ ಹೇರಿದರೆ, ತೊಂದರೆಯಾಗಲಿದೆ. ಕೋವಿಡ್ ಎರಡನೇ ಅಲೆಯ ಬಗ್ಗೆ ಕೈಗಾರಿಕೆಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಕೈಗಾರಿಕೆಗಳಿಗೆ ಕಚ್ಛಾ ಸಾಮಗ್ರಿ ಸರಬರಾಜು ಮಾಡುವವರಿಗೆ ಯಾವುದೇ ಅಡಚಣೆಯಾಗದಂತೆ ಪೊಲೀಸ್ ಇಲಾಖೆಗೆ ಸರ್ಕಾರ ನಿರ್ದೇಶಿಸಬೇಕು’ ಎಂದೂ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.