ADVERTISEMENT

ಕೋವಿಡ್ ಕರ್ತವ್ಯಕ್ಕೆ ಗೈರು: 3 ಸಾವಿರ ಸಿಬ್ಬಂದಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 0:37 IST
Last Updated 8 ಆಗಸ್ಟ್ 2020, 0:37 IST

ಬೆಂಗಳೂರು: ನಗರದ ಪಶ್ಚಿಮ ವಲಯದಲ್ಲಿ ಕೋವಿಡ್‌ ಕರ್ತವ್ಯಕ್ಕೆ ಗೈರಾದ ಮೂರು ಸಾವಿರ ಮಂದಿಗೆ ನೋಟಿಸ್ ‌ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ವಲಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಶುಕ್ರವಾರ ಅವಲೋಕಿಸಿದ ಅವರು, ’ಪಶ್ಚಿಮ ವಲಯದಲ್ಲಿ 6,500 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮೂರು ಸಾವಿರ‌ ಮಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ವಲಯದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೊಷ್ ನೋಟಿಸ್ ಕೊಟ್ಟಿದ್ದಾರೆ. ಅದರಲ್ಲಿ 700 ಮಂದಿ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರಿ‌ ನೌಕರರು ಕೂಡ ಇದರಲ್ಲಿ ಸೇರಿದ್ದಾರೆ‘ ಎಂದರು.

’ಸಿಬ್ಬಂದಿ ಕೊರತೆಯಿಂದ ಶಂಕಿತ ರೋಗಿಗಳ ಗಂಟಲು ದ್ರವದ ಮಾದರಿ ಸಂಗ್ರಹ ಹೆಚ್ಚು ಪ್ರಮಾಣದಲ್ಲಿ ಮಾಡಲು ಕಷ್ಟ ಆಗುತ್ತಿದೆ. ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ಒದಗಿಸಬೇಕು‘ ಎಂದು ಆಯುಕ್ತ ಪಿ.ಪ್ರದೀಪ್ ಅವರಿಗೆ ಸೂಚಿಸಿದರು.

ADVERTISEMENT

ಖಾಸಗಿ ಆಸ್ಪತ್ರೆಗೆ ಖುದ್ದು ಹೋಗಿ ಮಾತನಾಡಿ: ಕೆಲವು ಖಾಸಗಿ ಆಸ್ಪತ್ರೆಗಳು ನಿಗದಿ ಪ್ರಕಾರ ಬೆಡ್ ಕೊಡುತ್ತಿಲ್ಲ‌‌ ಎಂಬ ಆರೋಪಗಳು ಇದ್ದು ಈ ಬಗ್ಗೆ ಅಧಿಕಾರಿಗಳು ಖುದ್ದು ಹೋಗಿ ಪರಿಶೀಲಿಸಬೇಕು. ತಪ್ಪು ಎಸಗಿದ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ನಿಗದಿಯಂತೆ ಬೆಡ್‌ಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ಬಂದಿದ್ದು ಅದರ ಪರಿಶೀಲನೆ ನಡೆಸಬೇಕು ಎಂದು ಅಶ್ವತ್ಥನಾರಾಯಣ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.