ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಚೇತರಿಸಿಕೊಳ್ಳುವವರ ಸಂಖ್ಯೆ ನಗರದಲ್ಲಿ ಹೆಚ್ಚಳವಾಗುತ್ತಿದ್ದು, ಒಂದು ವಾರದ ಅವಧಿಯಲ್ಲಿ 15,116 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಸೋಂಕಿತರಲ್ಲಿ ಮಂಗಳವಾರ 4,274 ಮಂದಿ ಗುಣಮಖರಾಗಿದ್ದು, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 27 ಸಾವಿರ ದಾಟಿದೆ. ಹೊಸದಾಗಿ 2,035 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 63 ಸಾವಿರ ದಾಟಿದೆ.ಸೋಂಕಿತರಲ್ಲಿ ಮತ್ತೆ 30 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಕೋವಿಡ್ನಿಂದ ಸಾವಿಗೀಡಾದವರ ಸಂಖ್ಯೆ 1,134ಕ್ಕೆ ಏರಿಕೆಯಾಗಿದೆ. ಮಂಗಳವಾರ ದೃಢಪಟ್ಟ ಮರಣ ಪ್ರಕರಣದಲ್ಲಿ 5 ಮಂದಿ 50 ವರ್ಷದೊಳಗಿನವರು. 34 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 322 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ನಗರದ ಜ್ವರ ಚಿಕಿತ್ಸಾಲಯಗಳಲ್ಲಿ (ಫಿವರ್ ಕ್ಲಿನಿಕ್) ಒಂದೇ ದಿನ 3,874 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಇದರಿಂದಾಗಿ ಒಟ್ಟು ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ 62 ಸಾವಿರಕ್ಕೆ ಏರಿಕೆಯಾಗಿದೆ.
ವೈದ್ಯಾಧಿಕಾರಿ ವಿರುದ್ಧ ಕ್ರಮ: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೃತ ದೇಹವನ್ನು 12 ಗಂಟೆಗೂ ಅಧಿಕ ಕಾಲ ಇರಿಸಿಕೊಂಡಿದ್ದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಮೃತ ದೇಹವನ್ನು ಸ್ಥಳಾಂತರ ಮಾಡಲು ವಿಳಂಬ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ನಿರ್ಲಕ್ಷ್ಯ ತೋರುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ನಗರದ ಕೋವಿಡ್ ಪ್ರಕರಣಗಳ ಅಂಕಿ–ಅಂಶ
ಒಟ್ಟು ಪ್ರಕರಣಗಳು;63,033
ಗುಣಮುಖರಾದವರು;27,877
ಸಕ್ರಿಯ ಪ್ರಕರಣಗಳು;34,021
ಮೃತಪಟ್ಟವರು; 1,134
ಈ ದಿನದ ಏರಿಕೆ;2,035
ಗುಣಮುಖರು;4,274
ಮೃತಪಟ್ಟವರು;30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.