ADVERTISEMENT

ಬಿಎಂಆರ್‌ಸಿಎಲ್ ವಿರುದ್ಧ ಕೆಪಿಟಿಸಿಎಲ್ ದೂರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:30 IST
Last Updated 26 ಫೆಬ್ರುವರಿ 2021, 21:30 IST

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್‌) ಸೇರಿದ್ದ ಕೇಬಲ್‌ಗಳನ್ನು ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಬಿಎಂಆರ್‌ಸಿಎಲ್‌ (ಮೆಟ್ರೊ), ಅಫ್ಕಾನ್ಸ್‌ ಹಾಗೂ ಚಾಮುಂಡೇಶ್ವರಿ ಎಂಟರ್‌ಪ್ರೈಸಸ್‌ ವಿರುದ್ಧಪೊಲೀಸರಿಗೆ ಕೆಪಿಟಿಸಿಎಲ್‌ ದೂರು ನೀಡಿದೆ.

‘ಬಿಎಂಆರ್‌ಸಿಎಲ್‌ ಸಂಸ್ಥೆಯು 11 ಕೆ.ವಿ ಸಾಮರ್ಥ್ಯದ ಕೇಬಲ್‌ ಅಳವಡಿಸಲು ನಿರ್ಮಾಣ ಸಂಸ್ಥೆಯಾಗಿರುವಅಫ್ಕಾನ್ಸ್‌ ಹಾಗೂಚಾಮುಂಡೇಶ್ವರಿ ಎಂಟರ್‌ಪ್ರೈಸಸ್‌ ಸಂಸ್ಥೆಗಳಿಗೆ ಗುತ್ತಿಗೆ ನೀಡಿತ್ತು. ನಿಮ್ಹಾನ್ಸ್‌ ಮುಖ್ಯದ್ವಾರದ ಬಳಿ ತಮ್ಮ ಕೇಬಲ್ ಅಳವಡಿಸುವ ವೇಳೆಕೆಪಿಟಿಸಿಎಲ್‌ಗೆ ಸೇರಿರುವ220 ಕೆ.ವಿ.ಸಾಮರ್ಥ್ಯದ ಕೇಬಲ್‌ಗಳಿಗೆ ಹಾನಿ ಮಾಡಿದ್ದಾರೆ. ಫೆ.16ರಂದು ಪರಿಶೀಲನೆ ವೇಳೆ ಈ ವಿಚಾರ ತಿಳಿಯಿತು. ಸಂಸ್ಥೆಗೆ ಅಂದಾಜು ₹1.4 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಕೆಪಿಟಿಸಿಎಲ್‌ನ ಕಿರಿಯ ಎಂಜಿನಿಯರ್ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.

220 ಕೆ.ವಿ.ಸಾಮರ್ಥ್ಯದ ಒಂದು ಮೀಟರ್‌ ಕೇಬಲ್‌ನ ಬೆಲೆ ಅಂದಾಜು ₹23,493. ಹಾನಿಯಾಗಿರುವ ಸ್ಥಳದಲ್ಲಿ ಸುಮಾರು 60 ಮೀಟರ್‌ಗಳಷ್ಟು ಕೇಬಲ್ ದುರಸ್ತಿ ಮಾಡಬೇಕಿದೆ. ಜಾಯಿಂಟ್ ಕಿಟ್‌ ಕೇಬಲ್‌ಗೆ ₹8.14 ಲಕ್ಷ ಹಾಗೂ ಅಳವಡಿಕೆಗೆ ₹57 ಲಕ್ಷ ಹಾಗೂ ಉಳಿದ ಖರ್ಚು ₹11 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.

ADVERTISEMENT

‘ದೂರು ಸಂಬಂಧ ಎನ್‌ಸಿಆರ್‌ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಳ್ಳಲಾಗಿದೆ. ಕೋರ್ಟ್‌ನಿಂದ ಅನುಮತಿ ಪಡೆದ ನಂತರ ಎಫ್ಐಆರ್‌ ದಾಖಲಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.