ಬೆಂಗಳೂರು: ಆಸ್ತಿ ಹಂಚಿಕೆ ಸಂಬಂಧ ಶುರುವಾದ ಜಗಳದಿಂದಾಗಿ ಆರೋಪಿಯೊಬ್ಬ, ತನ್ನ ತಾಯಿ, ನಾದಿನಿ ಹಾಗೂ ಸಹೋದರನ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
‘ಬಿಟಿಎಂ ಲೇಔಟ್ 1ನೇ ಹಂತದ ಡಾಲರ್ಸ್ ಕಾಲೊನಿ ನಿವಾಸಿ ಗೋಪಿಕೃಷ್ಣ (38) ಎಂಬಾತ ತಾಯಿ ಗುಣಮ್ಮ (60), ನಾದಿನಿ ಗಿರಿಜಾ (25), ಸಹೋದರನ ಮಗಳು ಅಕ್ಷತಾ (4) ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಆತನನ್ನು ಬಂಧಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪದ್ಮನಾಭಯ್ಯ ಎಂಬುವರ ಪುತ್ರರಾದ ಸೋಮೇಶ್ ಮತ್ತು ಆರೋಪಿ ಗೋಪಿಕೃಷ್ಣ ನಡುವೆ ಆಸ್ತಿ ಹಂಚಿಕೆ ಸಂಬಂದ ವೈಮನಸ್ಸು ಉಂಟಾಗಿತ್ತು. ಆಸ್ತಿ ಪಾಲು ಹಾಗೂ ಮಾರಾಟ ಮಾಡುವ ವಿಚಾರವಾಗಿ ಜಗಳವೂ ನಡೆಯುತ್ತಿತ್ತು.’
‘ಜ.16ರಂದು ಬೆಳಿಗ್ಗೆ 10.30ರ ಸುಮಾರಿಗೆ ಪತ್ನಿ ಶಿಲ್ಪಾ ಜೊತೆ ಗೋಪಿಕೃಷ್ಣ, ಸಹೋದರ ಸೋಮೇಶ್ ಮನೆಗೆ ಹೋಗಿದ್ದ. ಸೋಮೇಶ್ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ತಾಯಿ ಗುಣಮ್ಮ ಅವರ ಕತ್ತಿಗೆ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದಿದ್ದ. ರಕ್ಷಣೆಗೆ ಬಂದ ನಾದಿನಿ ಗಿರಿಜಾ ಹಾಗೂ ಮನೆಯಲ್ಲಿ ಆಟವಾಡುತ್ತಿದ್ದ ಅಕ್ಷತಾಳಿಗೂ ಚಾಕುವಿನಿಂದ ಇರಿದಿದ್ದ. ಗಾಯಾಳುಗಳ ಚೀರಾಟ ಕೇಳಿ ಸಹಾಯಕ್ಕೆ ಬಂದಿದ್ದ ಸ್ಥಳೀಯರು, ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಸೋಮೇಶ್ ಅವರು ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.