ಬೆಂಗಳೂರು: ಹಸು ಕದ್ದು ಹತ್ಯೆ ಮಾಡಿದ ಆರೋಪದಡಿ ಇಬ್ಬರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಸೈಯದ್ ಬರ್ಕತ್ ಹಾಗೂ ಇಮ್ರಾನ್ ಪಾಷಾ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಸುಹೈಲ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.
‘ಹೆಣ್ಣೂರು ಠಾಣೆ ವ್ಯಾಪ್ತಿಯ ಎಚ್ಬಿಆರ್ ಬಡಾವಣೆಯಲ್ಲಿ ಜೂನ್ 7ರಂದುಆರೋಪಿಗಳು ಆಟೊದಲ್ಲಿ ಹೊರಟಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ಆಟೊದ ಹೆಡ್ಲೈಟ್ ಇಲ್ಲದಿರುವುದನ್ನು ಗಮನಿಸಿದ್ದರು. ಅನುಮಾನಗೊಂಡು ಆಟೊ ನಿಲ್ಲಿಸಲು ಮುಂದಾಗಿದ್ದರು. ಆದರೆ, ಆರೋಪಿಗಳು ಪರಾರಿಯಾ ಗಲು ಯತ್ನಿಸಿದ್ದರು. ಬೆನ್ನಟ್ಟಿದ್ದ ಸಿಬ್ಬಂದಿ, ಆಟೊ ಅಡ್ಡಗಟ್ಟಿದ್ದರು.’ ‘ಬರ್ಕತ್ ಹಾಗೂ ಇಮ್ರಾನ್ ಪಾಷಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರು. ಸುಹೈಲ್ ಓಡಿಹೋದ. ಆಟೊದಲ್ಲಿ ಪರಿಶೀಲನೆ ನಡೆಸಿದಾಗ, ಹಸುವಿನ ಮಾಂಸ ಇರುವುದು ಗೊತ್ತಾಯಿತು’ ಎಂದೂ ಹೇಳಿದರು.
ಹೊಟ್ಟೆಯಲ್ಲಿತ್ತು ಕರು: ‘ಗರ್ಭ ಧರಿಸಿದ್ದ ಹಸು, ಹೆಣ್ಣೂರು ಬಳಿಯ ತೋಪಿನಲ್ಲಿ ಮೇಯುತ್ತಿತ್ತು. ಅದನ್ನು ಕದ್ದಿದ್ದ ಆರೋಪಿಗಳು, ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಹತ್ಯೆ ಮಾಡಿ ದ್ದರು’ ಎಂದು ಪೊಲೀಸರು ಹೇಳಿದರು.
‘ಮಾಂಸ ಹಾಗೂ ಚರ್ಮ ಬೇರ್ಪಡಿಸಿದ್ದ ಆರೋಪಿಗಳು, ಅದನ್ನು ಮಾರಲು ಹೊರಟಿದ್ದಾಗಲೇ ಸಿಕ್ಕಿಬಿದ್ದರು. ಹಸುವಿನ ಹೊಟ್ಟೆಯಲ್ಲಿ ಕರು ಇತ್ತು. ಅದರ ಮೃತದೇಹವನ್ನೂ ಆರೋಪಿಗಳು ಬೇರ್ಪಡಿಸಿಟ್ಟಿದ್ದರು’ ಎಂದೂ ತಿಳಿಸಿದರು.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.