ADVERTISEMENT

ಮದುವೆ ನಿರಾಕರಿಸಿದ್ದಕ್ಕೆ ಮಹಿಳೆ ಕೊಲೆ: ಕಂಪನಿ ಸಹೋದ್ಯೋಗಿ ಬಂಧನ

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಂಗೇರಿ ಠಾಣೆಯ ವ್ಯಾಪ್ತಿಯಲ್ಲಿ ಅನಿತಾ (23) ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಅವರ ಸಹೋದ್ಯೋಗಿ ವೆಂಕಟೇಶ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ದೊಡ್ಡಬೆಲೆ ರಸ್ತೆಯ ಬೃಂದಾವನ ಬಡಾವಣೆಯಲ್ಲಿ ಸೋಮವಾರ ಬೆಳಿಗ್ಗೆ ಈ ಕೊಲೆ ನಡೆದಿದೆ. ಪ್ರತ್ಯಕ್ಷದರ್ಶಿಗಳು ನೀಡಿದ್ದ ಮಾಹಿತಿ ಆಧರಿಸಿ ಆರೋಪಿ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಿವಾಹಿತ ಮಹಿಳೆ ಅನಿತಾ ಜೊತೆ ಸ್ನೇಹ ಹೊಂದಿದ್ದ ಆರೋಪಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಅಷ್ಟಕ್ಕೆ ಸಿಟ್ಟಾದ ಆರೋಪಿ, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

ADVERTISEMENT

ಮೂರು ವರ್ಷಗಳಿಂದ ಪರಿಚಯ: ‘ಆಂಧ್ರಪ್ರದೇಶದ ಅನಿತಾ, ಸಂಬಂಧಿಕ ಯುವಕನನ್ನು ಮದುವೆ ಆಗಿದ್ದರು. ಕೌಟುಂಬಿಕ ಕಲಹದಿಂದ ಪತಿಯಿಂದ ದೂರವಾಗಿದ್ದ ಅವರು, ಕೆಲಸಕ್ಕಾಗಿ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಸ್ನೇಹಿತೆಯರ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಂಪನಿಯಲ್ಲಿ ಸಹೋದ್ಯೋಗಿ ವೆಂಕಟೇಶ್‌ ಪರಿಚಯವಾಗಿ, ಸ್ನೇಹ ಬೆಳೆದಿತ್ತು. ಇಬ್ಬರ ನಡುವೆ ಸಲುಗೆ ಇತ್ತು ಎನ್ನಲಾಗುತ್ತಿದೆ’ ಎಂದೂ ಅಧಿಕಾರಿ ಹೇಳಿದರು.

‘6 ತಿಂಗಳ ಹಿಂದಷ್ಟೇ ಆರೋಪಿ, ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆಗಾಗ ಅನಿತಾ ಅವರನ್ನು ಭೇಟಿಯಾಗಿ ಸುತ್ತಾಡುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಗಳಿಗೆ ತಂದೆ ಎಚ್ಚರಿಕೆ ನೀಡಿದ್ದರು. ಇದೇ ವಿಷಯವನ್ನು ಆರೋಪಿಗೆ ತಿಳಿಸಿದ್ದ ಯುವತಿ, ‘ನನ್ನ ತಂಟೆಗೆ ಬರಬೇಡ. ಮಾತನಾಡಿಸಬೇಡ’ ಎಂದಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ’ ಎಂದೂ ವಿವರಿಸಿದರು.

₹ 80 ಚಾಕು ಖರೀದಿ: ‘ಸೂಪರ್‌ ಮಾರುಕಟ್ಟೆಯಲ್ಲಿ ₹ 80 ಚಾಕು ಖರೀದಿಸಿದ್ದ ಆರೋಪಿ, ಕೊಲೆ ಮಾಡಲು ಸಮಯಕ್ಕಾಗಿ ಕಾಯುತ್ತಿದ್ದ. ಸೋಮವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅನಿತಾ ಅವರು ಕೆಲಸಕ್ಕಾಗಿ ಕಂಪನಿಯತ್ತ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿ, ಕೆಲ ನಿಮಿಷ ಮಾತನಾಡಿದ್ದ. ನಂತರ ದಾಳಿ ಮಾಡಿ ಚಾಕುವಿನಿಂದ ಕತ್ತು ಕೊಯ್ದಿದ್ದ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ರಕ್ತಸ್ರಾವದಿಂದಾಗಿ ಕುಸಿದು ಬಿದ್ದಿದ್ದ ಅನಿತಾ, ನರಳಾಡುತ್ತಿದ್ದರು. ಅವರನ್ನು ರಕ್ಷಿಸಲು ಮುಂದಾಗಿದ್ದ ವೆಂಕಟೇಶ್, ಸ್ಥಳೀಯರ ಜೊತೆಯಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಗೀತಾ ಅಸುನೀಗಿದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.