ADVERTISEMENT

ಹೆಲ್ಮೆಟ್‌ನಿಂದ ಹೊಡೆದು ವ್ಯಕ್ತಿಯ ಕೊಲೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 22:20 IST
Last Updated 3 ಸೆಪ್ಟೆಂಬರ್ 2021, 22:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೆಲ್ಮೆಟ್‌ನಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆದು ಕೊಲೆ ಮಾಡಿದ್ದ ಮಹೇಶ್‌ ಮತ್ತು ನಾಗರಾಜ್‌ ಅವರನ್ನು ಬಸವೇಶ್ವರನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಬಾಲಾಜಿ (49) ಮೃತ ವ್ಯಕ್ತಿ. ಬೆಮೆಲ್‌ ಬಡಾವಣೆ ನಿವಾಸಿಯಾಗಿರುವ ಇವರು ಸಿವಿಲ್‌ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲು ಪ್ರದೇಶದವರು’ ಎಂದು ಪೊಲೀಸರು ತಿಳಿಸಿದರು.

‘ಇವರೆಲ್ಲಾ ಗುರುವಾರ ರಾತ್ರಿ ಬಾರ್‌ವೊಂದರಲ್ಲಿ ವಿಪರೀತ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೈ ಕೈ ಮಿಲಾಯಿಸಿದ್ದರು. ಅಲ್ಲಿದ್ದವರು ಜಗಳ ಬಿಡಿಸಿ ಎರಡೂ ಕಡೆಯವರನ್ನು ಹೊರಗೆ ಕಳಿಸಿದ್ದರು. ಮಳೆ ಸುರಿಯುತ್ತಿದ್ದ ಕಾರಣ ಬಾಲಾಜಿ ಅವರು ಬಾರ್‌ನಿಂದ ಸ್ಪಲ್ಪ ದೂರ ಹೋಗಿ ನಿಂತಿದ್ದರು. ಅಲ್ಲಿಗೆ ಹೋಗಿದ್ದ ಮಹೇಶ್‌ ಮತ್ತು ನಾಗರಾಜ್‌ ಮತ್ತೆ ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದಿತ್ತು. ಸಿಟ್ಟಿಗೆದ್ದ ಮಹೇಶ್‌ ಹೆಲ್ಮೆಟ್‌ನಿಂದ ಬಾಲಾಜಿ ತಲೆಗೆ ಬಲವಾಗಿ ಹೊಡೆದಿದ್ದರು. ಪ್ರಜ್ಞೆ ತಪ್ಪಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರ ಉಸಿರು ನಿಂತಿತ್ತು’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.