ಬೆಂಗಳೂರು: ಪತಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಮಹಿಳೆಯೊಬ್ಬರು ತಂದಿದ್ದ ಹಣವನ್ನು ದೋಚಿದ್ದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಬನಶಂಕರಿಯ ಕುಮಾರ್ (22), ಒಡಿಶಾದ ದಾಸ್ ಬಾಲಾಜಿ (24) ಹಾಗೂ ಪ್ರೇಮದಾಸ್ (25) ಬಂಧಿತರು. ಅವರಿಂದ ₹60 ಸಾವಿರ ನಗದು, 14 ಗ್ರಾಂ ಚಿನ್ನದ ಸರ ಹಾಗೂ 126 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.
‘ದೂರುದಾರ ಮಹಿಳೆಯ ಪತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಶಸ್ತ್ರಚಿಕಿತ್ಸೆಗಾಗಿ ಹಣ ಹೊಂದಿಸಿಕೊಂಡಿದ್ದ ಮಹಿಳೆ, ಶಿವಮೊಗ್ಗದಿಂದ ಬಸ್ಸಿನಲ್ಲಿ ಇದೇ 13ರಂದು ಬೆಳಿಗ್ಗೆ ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು, ಹಣ ಹಾಗೂ ಚಿನ್ನದ ಸರವಿದ್ದ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದರು.’
‘ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ಸಿ.ಬಿ. ಶಿವಸ್ವಾಮಿ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿದೆ’ ಎಂದೂ ಹೇಳಿದರು.
ಹಲವು ತಿಂಗಳಿನಿಂದ ಮೊಬೈಲ್ ಕಳವು; ‘ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ ದಾಸ್ ಬಾಲಾಜಿ ಹಾಗೂ ಪ್ರೇಮ್ದಾಸ್, ಸ್ಥಳೀಯ ಆರೋಪಿ ಕುಮಾರ್ ಜೊತೆ ಸೇರಿ ಮೊಬೈಲ್ ಕಳ್ಳತನ ಆರಂಭಿಸಿದ್ದರು. ಇದುವರೆಗೂ ಅವರು 150ಕ್ಕೂ ಹೆಚ್ಚು ಮೊಬೈಲ್ ಕದ್ದಿರುವ ಮಾಹಿತಿ ಇದೆ. ಸದ್ಯ 126 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.