ಬೆಂಗಳೂರು: ದಸರಾ ಅಂಬಾರಿಯನ್ನು ಹೊತ್ತಿದ್ದ ಗೋಪಾಲಸ್ವಾಮಿ ಆನೆ ಇತ್ತೀಚಿಗೆ ನಮ್ಮನ್ನು ಅಗಲಿದ್ದು, ಅದರ ಪ್ರತಿಕೃತಿ ಕೇಕ್ನಲ್ಲಿ ಅನಾವರಣಗೊಂಡಿದೆ. ಕ್ರಿಸ್ಮಸ್ ಅಂಗವಾಗಿ ಆಯೋಜಿಸಿರುವ 48ನೇ ಕೇಕ್ ಪ್ರದರ್ಶನದಲ್ಲಿ ಅದು ಕೇಕ್ಪ್ರಿಯರನ್ನು ಆಕರ್ಷಿಸುತ್ತಿದೆ.
ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅ್ಯಂಡ್ ಕೇಕ್ ಆರ್ಟ್ ಮತ್ತು ಮೈಬೇಕರ್ ಸ್ಮಾರ್ಟ್ ಸಹಯೋಗದಲ್ಲಿ ಯು.ಬಿ. ಸಿಟಿಯ ಸೇಂಟ್ ಜೋಸೆಫ್ ಸ್ಕೂಲ್ ಮೈದಾನದಲ್ಲಿ ಈ ಪ್ರದರ್ಶನ ನಡೆಯುತ್ತಿದೆ. ಈ ಬಾರಿ ‘ಒಳಿತು–ಕೆಡಕು, ಪ್ರಕೃತಿ–ಸಾಮರಸ್ಯ, ಇತಿಹಾಸ ಮತ್ತು ಸ್ಮರಣೆ’ ಎಂಬ ವಿಷಯಗಳ ಮೇಲೆ ವಿವಿಧ ಬಗೆಯ 28 ಕೇಕ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಡಿ. 16ರಿಂದ ಜನವರಿ 2ರ ವರೆಗೆ ಈ ಪ್ರದರ್ಶನ ನಡೆಯಲಿದೆ.
ಚಕ್ರವರ್ತಿ ಅಶೋಕ ಸಾರಾನಾಥದಲ್ಲಿ ಸ್ಥಾಪಿಸಿರುವ ಅಶೋಕ ಸ್ತಂಭ, ನೇವಾರ್ಕ್ದ ಬೆಸಿಲಿಕಾ ಆಫ್ ದಿ ಸೇಕ್ರೆಡ್ ಹಾರ್ಟ್ ಚರ್ಚ್, ವಿದ್ಯುತ್ ಚಾಲಿತ ಕಾರು, ಬೇಲೂರಿನ ಶ್ರೀರಾಮ ಮತ್ತು ಶಿಷ್ಯರ ಶಿಲ್ಪಗಳು, ಭಾರತೀಯ ಶಸ್ತ್ರಚಿಕಿತ್ಸೆ ಪದ್ಧತಿ ಮತ್ತು ಔಷಧೀಯ ವಿಧಾನ, ಕ್ರಿಸ್ಮಸ್ ಟ್ರೀ, ಗೋಲ್ಡನ್ ಎಗ್, ಚೆಕ್ ಮೇಟ್, ಉಗಿಬಂಡಿಯ ಎಂಜಿನ್ ಸೇರಿ ವಿವಿಧ 28 ಬಗೆಯ ಆಕರ್ಷಣೆಯ ಕೇಕ್ಗಳ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.
‘ಆರು ತಿಂಗಳ ಮುಂಚಿತವಾಗಿ ಈ ಪ್ರದರ್ಶನಕ್ಕೆ ತಯಾರಿ ಮಾಡಿಕೊಂಡಿದ್ದೆವು. ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಈ ಪ್ರದರ್ಶನ ಖುಷಿ ಕೊಡುವ ವಿಶ್ವಾಸವಿದೆ’ ಎಂದು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ನ ನಿರ್ದೇಶಕ ಮನೀಷ್ ಗೌರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.