ADVERTISEMENT

ಆರ್ಟ್ ಪಾರ್ಕ್‌ಗೆ ರಾಜ್ಯ ಸರ್ಕಾರದಿಂದ ₹ 60 ಕೋಟಿ ನೆರವು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 7:08 IST
Last Updated 14 ಮಾರ್ಚ್ 2022, 7:08 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ    

ಬೆಂಗಳೂರು: ‘ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ‘ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ರೊಬೋಟಿಕ್ ತಂತ್ರಜ್ಞಾನ ಪಾರ್ಕ್’ ಅನ್ನು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದರು ಅವರು, ‘ಕೃತಕ ಬುದ್ಧಿಮತ್ತೆ ಆಧಾರಿತ ಅರ್ಥ ವ್ಯವಸ್ಥೆಯು 2030ರ ವೇಳೆಗೆ 15.7 ಟ್ರಿಲಿಯನ್ ಡಾಲರ್ ಸಾಮರ್ಥ್ಯವುಳ್ಳದ್ದಾಗಿದ್ದು, ದೇಶದ ಈಗಿನ ಜಿಡಿಪಿ ಮೊತ್ತಕ್ಕಿಂತ 6 ಪಟ್ಟು ಹೆಚ್ಚು ಶಕ್ತಿ ತರುವ ನಿರೀಕ್ಷೆಯಿದೆ’ ಎಂದರು. ಈ ಕೇಂದ್ರದ ಸ್ಥಾಪನೆಗೆ ‘ಎಐ ಫೌಂಡ್ರಿ’ ಕೂಡ ನೆರವು ನೀಡಿದೆ.

‘ಆರ್ಟ್ ಪಾರ್ಕ್‌ನಲ್ಲಿ ನಡೆಯಲಿರುವ ಸಂಶೋಧನೆಗಳು ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕ, ಮೂಲಸೌಲಭ್ಯ, ಕೃಷಿ, ಚಿಲ್ಲರೆ ವ್ಯಾಪಾರ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅತ್ಯಾಧುನಿಕ ಕೌಶಲಗಳನ್ನು ಪೂರೈಸಲಿದೆ. ಈ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ₹ 170 ಕೋಟಿ ಕೊಟ್ಟಿದ್ದು, ರಾಜ್ಯ ಸರ್ಕಾರವು ₹ 60 ಕೋಟಿ ಬೀಜಧನವಾಗಿ (ಸೀಡ್ ಕ್ಯಾಪಿಟಲ್) ನೀಡಿದೆ’ ಎಂದರು.

ADVERTISEMENT

‘ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾಗಿ ಮುನ್ನೆಲೆಗೆ ಬಂದ ಬಿಪಿಒಗಳು ಬೆಳವಣಿಗೆಯ ತುತ್ತತುದಿ ತಲುಪಿವೆ. ಮುಂಬರುವ ದಿನಗಳೆಲ್ಲ ಕೃತಕ ಬುದ್ಧಿಮತ್ತೆ ಆಧರಿಸಿರಲಿವೆ. ಇದು ಶಿಕ್ಷಣ ಮತ್ತು ಕೌಶಲಗಳ ನಡುವೆ ಇರುವ ಅಂತರವನ್ನು ತೊಡೆದು ಹಾಕಲಿದೆ’ ಎಂದರು.

‘20 ವರ್ಷಗಳಲ್ಲಿ ತಂತ್ರಜ್ಞಾನವು ಬದುಕನ್ನು ಅಗಾಧವಾಗಿ ಪ್ರಭಾವಿಸಿದೆ. ಡಿಜಿಟಲೀಕರಣವು ಅಗಾಧ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಆರೋಗ್ಯ ಮತ್ತು ಆರ್ಥಿಕ ಸೇವೆಗಳ ಪೂರೈಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಕರ್ನಾಟಕದಲ್ಲಿರುವ ಸಂಶೋಧನೆ ಮತ್ತು ನಾವೀನ್ಯತೆಯ ಕಾರ್ಯ ಪರಿಸರವು ಎಐ ಮತ್ತು ರೊಬೋಟಿಕ್ಸ್ ಆಧಾರಿತ ಉದ್ದಿಮೆಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದೆ. ಡೇಟಾ ವಿಜ್ಞಾನವು ಉಜ್ವಲ ಅವಕಾಶಗಳ ಚಿನ್ನದ ಗಣಿಯಂತಿದೆ’ ಎಂದು ಸಚಿವರು ಬಣ್ಣಿಸಿದರು.

ಸಮಾವೇಶವನ್ನು ಉದ್ದೇಶಿಸಿ ವರ್ಚುಯಲ್ ಆಗಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ‘ಗ್ರಾಮೀಣ ಪ್ರದೇಶಗಳಲ್ಲಿ ಹುದುಗಿರುವ ಆರ್ಥಿಕ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಂಡರೆ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ಏರಬಹುದು. ಈ ನಿಟ್ಟಿನಲ್ಲಿ ಅಟಲ್ ಇನ್ನೋವೇಶನ್ ಮಿಶನ್ ಮತ್ತು ನವೋದ್ಯಮಗಳೊಂದಿಗೆ ಜತೆಗೂಡಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಐಎ ಮತ್ತು ರೊಬೋಟಿಕ್ಸ್ ಕುರಿತ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿ ವಿವಿಧ ರೀತಿಯ ರೊಬೋಟ್, ಡ್ರೋಣ್ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಸ್ತುಗಳನ್ನು ಸಾಗಿಸಬಲ್ಲ‌ ವಾಕಿಂಗ್ ಡ್ರೋಣ್‌ಗಳ ಪ್ರದರ್ಶನ ಗಮನಸೆಳೆಯಿತು.

ಆರ್ಟ್ ಪಾರ್ಕ್ ಸಿಇಒ ಉಮಾಕಾಂತ್ ಸೋನಿ, ನಿರ್ದೇಶಕ ಪ್ರೊ. ರಂಗರಾಜನ್, ಸಿಐಒ ಶುಭಶಿಶ್ ಬ್ಯಾನರ್ಜಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್. ಚಂದ್ರಶೇಖರ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಉದ್ಯಮಿ ವಿವೇಕ್ ರಾಘವನ್, ಮೋಹನ್ ದಾಸ್ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.