ADVERTISEMENT

ಭಾವನಾಗೆ ವಿವರಣೆ ಕೇಳಿದ ಸಂಸ್ಕೃತಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:48 IST
Last Updated 31 ಆಗಸ್ಟ್ 2018, 19:48 IST

ಬೆಂಗಳೂರು: ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಾಣದ ಗೊಂದಲ ಪ್ರಾರಂಭವಾಗಿ ತಿಂಗಳು ಕಳೆಯುತ್ತಿದ್ದರೂ ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ.

‘ನಿರ್ಮಾಣವಾಗಿದ್ದ ಕಟ್ಟಡ ಇನ್ನೂ ಮೈದಾನದಲ್ಲಿ ಹಾಗೆಯೇ ಇದೆ. ಇದೇ 14ರಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಈ ಹಿಂದೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಕುಮಾರ ಖತ್ರಿ ಅವರಿಗೆ ಸೂಚಿಸಿದ್ದರು. ಆದರೆ, ಅದರ ಬಗ್ಗೆ ಇಲಾಖೆ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸಿಲ್ಲ’ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರು ತಿಳಿಸಿದರು.

ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸಲು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಅನುಮತಿ ನೀಡಿದೆ ಎನ್ನುವ ಮಾತು ಈ ವಿವಾದದಲ್ಲಿ ಕೇಳಿಬಂದಿತ್ತು. ‘ಆ ರೀತಿಯ ಯಾವುದೇ ಅನುಮತಿ ನೀಡಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಭಾವನಾ ರಾಮಣ್ಣ ಅವರ ಹೂವು ಪ್ರತಿಷ್ಠಾನಕ್ಕೆ ₹60 ಲಕ್ಷ ಅನುದಾನ ನೀಡಿದ್ದೇವೆ’ ಎಂದು ಇಲಾಖೆಯ ನಿರ್ದೇಶಕ ವಿಶು ಕುಮಾರ್‌ ಅವರು ಸ್ಪಷ್ಟಪಡಿಸಿದರು.

ADVERTISEMENT

ಈ ವಿವಾದದ ನಂತರ ಪ್ರತಿಷ್ಠಾನಕ್ಕೆ ಪತ್ರ ಬರೆದಿರುವ ಇಲಾಖೆ, ‘ಪ್ರತಿ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನೀಡಿದ್ದ ಅನುದಾನವನ್ನು ಯಾವ ರೀತಿ ಬಳಕೆ ಮಾಡಿಕೊಂಡಿದ್ದೀರಿ ಎನ್ನುವ ಬಗ್ಗೆ ಸಮಗ್ರ ವರದಿ ನೀಡಬೇಕು’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.