ADVERTISEMENT

ವಿಮೆ ಬೋನಸ್‌ ಹೆಸರಿನಲ್ಲಿ ₹7.17 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 19:43 IST
Last Updated 8 ಡಿಸೆಂಬರ್ 2018, 19:43 IST

ಬೆಂಗಳೂರು: ವಿಮೆಯಲ್ಲಿ ಬೋನಸ್‌ ಪಾಯಿಂಟ್ ಬಂದಿರುವುದಾಗಿ ಹೇಳಿ ನಂಬಿಸಿದ್ದ ಖದೀಮರಿಬ್ಬರು, ನಗರದ ನಿವಾಸಿ ಚಿತ್ರಾ ಸುಧೀರ್ ಎಂಬುವರಿಂದ ₹7.17 ಲಕ್ಷ ಪಡೆದು ವಂಚಿಸಿದ್ದಾರೆ.

ವಂಚನೆ ಸಂಬಂಧ ಚಿತ್ರಾ, ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಜೂನ್‌ನಲ್ಲಿ ಮೊಬೈಲ್‌ಗೆ ಕರೆ ಮಾಡಿದ್ದ ಅಂಜಲಿ ಜೋಶಿ ಎಂಬಾಕೆ, ‘ವಿಮೆಯಲ್ಲಿ ಬೋನಸ್ ಪಾಯಿಂಟ್‌ ಬಂದಿದೆ. ಕೆಲವು ಶುಲ್ಕಗಳನ್ನು ಪಾವತಿ ಮಾಡಿದರೆ ನಿಮಗೆ ಲಕ್ಷಗಟ್ಟಲೇ ಹಣ ಬರುತ್ತದೆ’ ಎಂದು ಹೇಳಿದ್ದಳು. ಅದಾದ ನಂತರ ವಿಕ್ರಂ ಸಿಂಗ್‌ ಚೌಹಾಣ್‌ ಎಂಬಾತ ಸಹ ಕರೆಮಾಡಿ ಅದನ್ನೇ ಹೇಳಿದ್ದ’ ಎಂದು ದೂರಿನಲ್ಲಿ ಚಿತ್ರಾ ತಿಳಿಸಿದ್ದಾರೆ.

ADVERTISEMENT

‘ಅಂಜಲಿ ಹಾಗೂ ವಿಕ್ರಂಸಿಂಗ್‌ ಅವರ ಮಾತು ನಿಜವೆಂದು ನಂಬಿ, ಅವರಿಬ್ಬರು ನೀಡಿದ್ದ ಬ್ಯಾಂಕ್ ಆಫ್ ಬರೋಡಾ ಹಾಗೂ ಯೂನಿಯನ್ ಬ್ಯಾಂಕ್ ಶಾಖೆಗಳ ಖಾತೆಗಳಿಗೆ ₹7.17 ಲಕ್ಷ ಜಮೆ ಮಾಡಿದ್ದ. ಅದಾದ ನಂತರ, ಆರೋಪಿಗಳು ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅವರಿಬ್ಬರನ್ನು ಪತ್ತೆ ಹಚ್ಚಿ’ ಎಂದು ಕೋರಿದ್ದಾರೆ.

ಸೈಬರ್ ಕ್ರೈಂ ಪೊಲೀಸರು, ‘ಚಿತ್ರಾ ಅವರ ದೂರು ಪರಿಶೀಲಿಸುತ್ತಿದ್ದೇವೆ. ಯಾವುದೇ ವಿಮೆ ಕಂಪನಿಯು ಬೋನಸ್‌ ಬಂದಿರುವುದಾಗಿ ಮೊಬೈಲ್‌ಗೆ ಕರೆ ಮಾಡಿ ತಿಳಿಸುವುದಿಲ್ಲ. ಇಂಥ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.