ಬೆಂಗಳೂರು: ಕೆಲಸದ ಆಮಿಷವೊಡ್ಡಿ ನಗರದ ನಿವಾಸಿಯೊಬ್ಬರಿಂದ ₹ 7.44 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ಯುವಕ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರರು ಉದ್ಯೋಗ ಬದಲಾಯಿಸಲು ಮುಂದಾಗಿದ್ದರು. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಕೆಲ ಜಾಲತಾಣಗಳಲ್ಲಿ ರಿಸ್ಯುಮೆ ಅಪ್ಲೋಡ್ ಮಾಡಿದ್ದರು. ವೈಯಕ್ತಿಕ ಇ– ಮೇಲ್ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ಕೆಲಸವಿರುವುದಾಗಿ ಹೇಳಿದ್ದರು. ಅರ್ಜಿ ಭರ್ತಿ ಮಾಡುವಂತೆ ಲಿಂಕ್ ಕಳುಹಿಸಿದ್ದರು’ ಎಂದೂ ತಿಳಿಸಿವೆ.
‘ಆರೋಪಿ ಮಾತು ನಂಬಿದ್ದ ದೂರುದಾರ, ಅರ್ಜಿ ಭರ್ತಿ ಮಾಡಿದ್ದರು. ಅದಾದ ನಂತರ ಶುಲ್ಕದ ರೂಪದಲ್ಲಿ ಆರೋಪಿಗಳು ಹಂತ ಹಂತವಾಗಿ ₹ 7.44 ಲಕ್ಷ ಪಡೆದುಕೊಂಡಿದ್ದರು. ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡಿದ್ದ ದೂರುದಾರ, ‘ಕೆಲಸ ಬೇಡ ಹಣ ವಾಪಸು ಕೊಡಿ’ ಎಂದಿದ್ದರು. ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.