
ಎಕ್ಸ್ ಲೋಗೊ– ರಾಯಿಟರ್ಸ್ ಚಿತ್ರ
ಬೆಂಗಳೂರು: ‘ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿದ್ದ ಅರವಿಂದ್ ಹಾಗೂ ಹರಿಕೃಷ್ಣ ಅವರು ₹ 30 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ (ಎನ್ಆರ್ಐ) ರಾಘವೇಂದ್ರ ಅವರು ಕಮಿಷನರ್ ಅವರಿಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ದೂರು ನೀಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಪ್ರಕಟಿಸಿ ಕಮಿಷನರ್ ಅವರ ಖಾತೆಗೆ ಟ್ಯಾಗ್ ಮಾಡಿರುವ ರಾಘವೇಂದ್ರ, ‘ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.
‘ಅಮೆರಿಕದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು ಯೋಚಿಸಿದ್ದೆ. ಕೆಂಗೇರಿ ಬಳಿ ನಿವೇಶನ ಮಾರಾಟಕ್ಕಿರುವ ಬಗ್ಗೆ ಜಾಹೀರಾತು ನೋಡಿದ್ದೆ. ಅದಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಜೆ.ಪಿ. ನಗರದ ಅರವಿಂದ್ ಹಾಗೂ ಹರಿಕೃಷ್ಣ ಪರಿಚಯವಾಗಿದ್ದರು’ ಎಂದು ರಾಘವೇಂದ್ರ ತಿಳಿಸಿದ್ದಾರೆ.
‘ನಿವೇಶನ ಖರೀದಿ ಬಗ್ಗೆ ಪರಸ್ಪರ ಮಾತುಕತೆ ಆಗಿತ್ತು. 2022ರ ಡಿಸೆಂಬರ್ನಲ್ಲಿ ₹ 30 ಲಕ್ಷ ನೀಡಿ ನಿವೇಶನ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೆ. ಆರೋಪಿಗಳು ಇದುವರೆಗೂ ನಿವೇಶನ ನೀಡಿಲ್ಲ. ಈ ಬಗ್ಗೆ ಜೆ.ಪಿ.ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಸ್ಪಂದಿಸುತ್ತಿಲ್ಲ. ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ನನ್ನ ಹಣ ವಾಪಸು ಕೊಡಿಸಿ’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.