ADVERTISEMENT

ಕೆಲಸದ ಹೊರೆ; ‘ದೂರು ಲಗತ್ತಿಸಲಾಗಿದೆ’ ಮೊರೆ

ಹೆಚ್ಚುತ್ತಿವೆ ಸೈಬರ್ ಅಪರಾಧಗಳು l ಏರುತ್ತಲೇ ಇದೆ ದೂರುದಾರರ ಸಂಖ್ಯೆ l ಠಾಣೆಯಲ್ಲಿ ಸಿಬ್ಬಂದಿ ಕೊರತೆ

ಸಂತೋಷ ಜಿಗಳಿಕೊಪ್ಪ
Published 19 ಜುಲೈ 2019, 19:46 IST
Last Updated 19 ಜುಲೈ 2019, 19:46 IST
ಸೈಬರ್ 
ಸೈಬರ್    

ಬೆಂಗಳೂರು: ಆಧುನಿಕ ತಂತ್ರಜ್ಞಾನ ಆಧರಿತ ಸೇವೆಗಳ ಬಳಕೆ ಪ್ರಸಿದ್ಧಿಯಾಗುತ್ತಿದ್ದಂತೆ, ಆನ್‌ಲೈನ್ ಹಾಗೂ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಜನರನ್ನು ವಂಚಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಅಪರಾಧಗಳನ್ನು ಭೇದಿಸುವುದಕ್ಕಾಗಿ ಸ್ಥಾಪಿಸಲಾಗಿರುವ ‘ಸೈಬರ್ ಕ್ರೈಂ’ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ದೂರುಗಳನ್ನು ಬರೆದುಕೊಳ್ಳಲಾಗದಷ್ಟು ಒತ್ತಡ ಸದ್ಯದ ಸಿಬ್ಬಂದಿಗಿದೆ.

ಬೆಳಿಗ್ಗೆಯಾದರೆ ಸಾಕು, ಸೈಬರ್ ಕ್ರೈಂ ಠಾಣೆ ಎದುರು ಜನ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿಬಿಟ್ಟಿದೆ. ಸಂಜೆಯಾದರೂ ದೂರುದಾರರ ಸರದಿ ಕಡಿಮೆಯಾಗುತ್ತಿಲ್ಲ. ಮೊದಲ ದಿನ ಅವಕಾಶ ಸಿಗದಿದ್ದರೆ, ಮರುದಿನವೂ ಠಾಣೆಗೆ ಬಂದು ದೂರು ದಾಖಲಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ 2015ರ ಅಕ್ಟೋಬರ್‌ನಲ್ಲಿ ಠಾಣೆ ತೆರೆಯಲಾಗಿದೆ. ಈ ಠಾಣೆಯಲ್ಲಿ ಈಗ ನಿತ್ಯವೂ 30ರಿಂದ 50 ದೂರುಗಳು ದಾಖಲಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಬಹುಪಾಲು ಪ್ರಕರಣ
ಗಳ ತನಿಖೆಗೂ ಹಿನ್ನಡೆ ಉಂಟಾಗಿದೆ.

ADVERTISEMENT

ರಾಜಧಾನಿಯಲ್ಲಿರುವ ಉದ್ಯೋಗಸ್ಥರು, ಮಹಿಳೆಯರು ಹಾಗೂ ವೃದ್ಧರನ್ನೇ ಗುರಿಯಾಗಿಸಿಕೊಂಡು ಖದೀಮರು ಕೃತ್ಯ ಎಸಗುತ್ತಿದ್ದಾರೆ. ಬ್ಯಾಂಕ್, ಆರ್‌ಬಿಐ, ಆಧಾರ್ ಸೇರಿದಂತೆ ವಿವಿಧ ಸಂಸ್ಥೆಗಳ ಹೆಸರು ಹೇಳಿಕೊಂಡು ಕರೆ ಮಾಡುತ್ತಿರುವ ಖದೀಮರು, ಜನರಿಂದ ತಮಗೆ ಬೇಕಾದ ಮಾಹಿತಿ ಪಡೆದು ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ.

ಖದೀಮರ ಕೃತ್ಯದಿಂದ ನಿತ್ಯವೂ 50ಕ್ಕೂ ಹೆಚ್ಚು ಮಂದಿಗೆ ವಂಚನೆಯಾಗುತ್ತಿದ್ದು, ಅವರೆಲ್ಲರೂ ದೂರು ನೀಡಲು ಸೈಬರ್ ಕ್ರೈಂ ಠಾಣೆಗೆ ಬರುತ್ತಿದ್ದಾರೆ. ಅವರು ನೀಡುವ ದೂರಿನಲ್ಲಿರುವ ಅಂಶಗಳನ್ನು ಎಫ್‌ಐಆರ್‌ನಲ್ಲಿ ಟೈಪ್‌ ಮಾಡಲೂ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ, ‘ದೂರಿನ ಪ್ರತಿಯನ್ನು ಲಗತ್ತಿಸಲಾಗಿದೆ’ ಎಂದಷ್ಟೇ ಎಫ್‌ಐಆರ್‌ನಲ್ಲಿ ಬರೆದು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ.

‘₹ 5 ಲಕ್ಷದೊಳಗಿನ ವಂಚನೆ ಸಂಬಂಧದ ದೂರುಗಳನ್ನು ಸೈಬರ್ ಠಾಣೆಯಲ್ಲಿ ನೀಡಬಹುದಾಗಿದೆ. ಬೆಂಗಳೂರು ಕಮಿಷನರೇಟ್‌ನ 108 ಸಿವಿಲ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಹುಪಾಲು ಜನ ಸೈಬರ್ ಅಪರಾಧಗಳ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಒಬ್ಬೊಬ್ಬ ದೂರುದಾರ, ಎರಡು ಹಾಗೂ ಅದಕ್ಕಿಂತ ಹೆಚ್ಚು ಪುಟಗಳ ದೂರು ನೀಡುತ್ತಿದ್ದಾರೆ. ಅವುಗಳನ್ನು ಸಂಪೂರ್ಣವಾಗಿ ಓದಿ ಎಫ್‌ಐಆರ್‌ನಲ್ಲಿ ಪುನಃ ಸಾರಾಂಶ ಬರೆಯಲು ಅಗತ್ಯವಿರುವಷ್ಟು ಸಿಬ್ಬಂದಿ ಠಾಣೆಯಲ್ಲಿ ಇಲ್ಲ. ಹೀಗಾಗಿ, ‘ದೂರಿನ ಪ್ರತಿಯನ್ನು ಲಗತ್ತಿಸಲಾಗಿದೆ’ ಎಂದಷ್ಟೇ ಬರೆಯಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

69 ಸಿಬ್ಬಂದಿ ಜಾಗದಲ್ಲಿ ಕೇವಲ 26: ‘ದಾಖಲೆ ಪ್ರಕಾರ, ಠಾಣೆಯಲ್ಲಿ 40 ಕಾನ್‌ಸ್ಟೆಬಲ್‌ಗಳು, 16 ಹೆಡ್‌ ಕಾನ್‌ಸ್ಟೆಬಲ್‌ಗಳು, ಆರು ಪಿಎಸ್ಐ, ನಾಲ್ವರು ಇನ್‌ಸ್ಪೆಕ್ಟರ್‌, ಇಬ್ಬರು ಎಸಿಪಿ ಹಾಗೂ ಡಿಸಿಪಿ ಇರಬೇಕು. ಈಗ ಕೇವಲ 26 ಸಿಬ್ಬಂದಿ ಇದ್ದಾರೆ.ಸಿಸಿಬಿಯ ಡಿಸಿಪಿ ಅವರಿಗೆ ಠಾಣೆಯ ಮೇಲ್ವಿಚಾರಣೆ ಉಸ್ತುವಾರಿ ವಹಿಸಲಾಗಿದೆ’ ಎಂದು ಹೇಳಿದರು.

ದೂರುದಾರ ರಾಮಚಂದ್ರ, ‘ಠಾಣೆಯಲ್ಲಿ ಎರಡು ಕೌಂಟರ್‌ ತೆರೆಯಲಾಗಿದೆ. ಒಂದು ದೂರು ಪಡೆಯಲು, ಇನ್ನೊಂದು ಎಫ್‌ಐಆರ್ ಪ್ರತಿ ಪಡೆಯಲು. ಬೆಳಿಗ್ಗೆಯಿಂದ ಸಂಜೆಯವರೆಗೂ ಸರದಿಯಲ್ಲಿ ನಿಂತು ದೂರು ಕೊಟ್ಟಿದ್ದೇನೆ. ಸಿಬ್ಬಂದಿ ಕಡಿಮೆ ಇರುವುದರಿಂದ ಕೆಲಸ ನಿಧಾನಗತಿಯಲ್ಲಿ ಆಗುತ್ತಿದೆ’ ಎಂದರು.

‘ದೂರಿನ ತನಿಖೆ ಪ್ರಗತಿ ಬಗ್ಗೆ ಠಾಣೆಗೆ ಕೇಳಲು ಹೋದಾಗ, ‘ಮಾಡುತ್ತಿದ್ದೇವೆ. ಸಿಬ್ಬಂದಿ ಕಡಿಮೆ ಇದ್ದಾರೆ’ ಎಂಬ ಉತ್ತರ ಸಿಗುತ್ತಿದೆ. ಹಣ ಕಳೆದುಕೊಂಡಿರುವ ನಮಗೆ, ಅದು ವಾಪಸ್‌ ಸಿಗುತ್ತದೆ ಎಂಬ ನಂಬಿಕೆಯೇ ಇಲ್ಲ. ಇದು ನನ್ನೊಬ್ಬನ ಸ್ಥಿತಿಯಲ್ಲ. ಬಹುತೇಕರದ್ದು ಇದೇ ಸ್ಥಿತಿ. ಸೈಬರ್ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ಅಪರಾಧ ಎಸಗುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸಿಇಎನ್’ ಠಾಣೆ ಆರಂಭಕ್ಕೆ ತಯಾರಿ

‘ಸೈಬರ್ ಠಾಣೆಗೆ ಪರ್ಯಾಯವಾಗಿ ನಗರದ ಎಂಟೂ ವಿಭಾಗಗಳಲ್ಲಿ ಸಿಇಎನ್‌ (ಸೈಬರ್, ಆರ್ಥಿಕ ಅಪರಾಧ ಹಾಗೂ ಮಾದಕ ವಸ್ತು ನಿಯಂತ್ರಣ) ಠಾಣೆ ಸ್ಥಾಪಿಸಲು ತಯಾರಿ ನಡೆದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸೈಬರ್ ಹಾಗೂ ಆರ್ಥಿಕ ಅಪರಾಧಗಳನ್ನು ಬಹುಬೇಗನೇ ಭೇದಿಸಲು ಸಿಇಎನ್ ಠಾಣೆಗಳಿಂದ ಸಾಧ್ಯವಾಗಲಿದೆ. ಆಯಾ ಡಿಸಿಪಿ ಕಚೇರಿ ಸಮೀಪದಲ್ಲೇ ಈ ಠಾಣೆಗಳು ಇರಲಿವೆ. ಜನರು ನೇರವಾಗಿ ಠಾಣೆಗಳಿಗೆ ದೂರು ನೀಡಬಹುದು’ ಎಂದರು.

ಸಿಐಡಿ ಸೈಬರ್ ವಿಭಾಗದಲ್ಲಿ 8 ದೂರು

₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಬಗ್ಗೆ ಸಿಐಡಿ ಸೈಬರ್‌ ವಿಭಾಗದಲ್ಲಿ ದೂರು ದಾಖಲಿಸಲು ಅವಕಾಶವಿದೆ. ಇದುವರೆಗೂ 8 ಮಂದಿ ಮಾತ್ರ ಸಿಐಡಿ ಸೈಬರ್ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.

‘ಬಹುಪಾಲು ಮಂದಿ, ₹ 5 ಲಕ್ಷಕ್ಕಿಂತ ಕಡಿಮೆ ಹಣ ಕಳೆದುಕೊಂಡಿದ್ದಾರೆ. ಅವರೆಲ್ಲ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಸೈಬರ್ ಠಾಣೆಯಲ್ಲೇ ದೂರು ದಾಖಲಿಸಿದ್ದಾರೆ. ಹೀಗಾಗಿ ಠಾಣೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಸಿಐಡಿಯಲ್ಲಿ ಕಡಿಮೆ ಆಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಾಗೃತಿ ವಿಡಿಯೊ ಬಿಡುಗಡೆ

‘ಸೈಬರ್ ವಂಚನೆ ಸಂಬಂಧ ‘ಮಾಹಿತಿ ತಂತ್ರಜ್ಞಾನ ಕಾಯ್ದೆ’ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಆದರೆ, ಬಹುಪಾಲು ಪ್ರಕರಣಗಳನ್ನು ಭೇದಿಸುವುದು ತುಂಬಾ ಕಷ್ಟ’ ಎಂದು ಪೊಲೀಸರು ಹೇಳಿದರು. ‘ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಮೊದಲು ಜಾಗೃತರಾಗಿರಬೇಕು. ಆ ರೀತಿಯಾದರೆ ಮಾತ್ರ ಇಂಥ ಅಪರಾಧಗಳ ಸಂಖ್ಯೆ ಕಡಿಮೆ ಆಗುತ್ತದೆ. ಅದೇ ಕಾರಣಕ್ಕೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇತ್ತೀಚೆಗೆ ಸರಣಿ ವಿಡಿಯೊಗಳನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಯಾವ ರೀತಿಯ ವಂಚನೆ ಬಗ್ಗೆ ದೂರು

* ಬ್ಯಾಂಕ್‌ ಹಾಗೂ ವಿವಿಧ ಸಂಸ್ಥೆಗಳ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಖಾತೆಗಳ ವಿವರ ಪಡೆದು ವಂಚನೆ

* ನೌಕರಿ ಆಮಿಷವೊಡ್ಡಿ ವಂಚನೆ

* ಮದುವೆ ಆಗುವುದಾಗಿ ವೈವಾಹಿಕ ಜಾಲತಾಣದ ಮೂಲಕ ಪರಿಚಯವಾಗಿ ವಂಚನೆ

* ಉಡುಗೊರೆ ಕಳುಹಿಸುವುದಾಗಿ ಹೇಳಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ

* ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿ ವಂಚನೆ

* ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ವಂಚನೆ

* ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಉಪಕರಣ ಅಳವಡಿಸಿ ವಂಚನೆ

ಅಂಕಿ–ಅಂಶ

* 2018ರಲ್ಲಿ ದಾಖಲಾದ ಪ್ರಕರಣಗಳು –8,150

* 2019ರ ಜೂನ್ 18ರವರೆಗೆ ದಾಖಲಾದ ಪ್ರಕರಣಗಳು –5,744

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.