ADVERTISEMENT

ವ್ಯಾಪಾರಿ ಸೋಗಿನಲ್ಲಿ ಸುತ್ತಾಡಿ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 22:00 IST
Last Updated 19 ಆಗಸ್ಟ್ 2023, 22:00 IST
   

ಬೆಂಗಳೂರು: ವ್ಯಾಪಾರಿ ಸೋಗಿನಲ್ಲಿ ಸುತ್ತಾಡಿ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಶೇಖರ್‌ನನ್ನು (50) ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಮಪುರ ದಯಾನಂದನಗರದ ನಿವಾಸಿ ಶೇಖರ್‌, ಹಲವು ದಿನಗಳಿಂದ ಸೈಕಲ್ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿ ₹ 5 ಲಕ್ಷ ಮೌಲ್ಯದ 19 ಸೈಕಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಲ್ಲೇಶ್ವರ ನಿವಾಸಿಯೊಬ್ಬರ ₹ 65 ಸಾವಿರ ಮೌಲ್ಯದ ಸೈಕಲ್‌ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಆರೋಪಿ ಸಿಕ್ಕಿಬಿದ್ದ’ ಎಂದರು.

ADVERTISEMENT

ಸೈಕಲ್‌ನಲ್ಲಿ ಸುತ್ತಾಟ: ‘ಬೆಳಿಗ್ಗೆ 5ರಿಂದ 7ರ ಅವಧಿಯಲ್ಲಿ ಸೈಕಲ್‌ನಲ್ಲಿ ಸುತ್ತಾಡುತ್ತಿದ್ದ ಆರೋಪಿ, ಯಾವೆಲ್ಲ ಮನೆಗಳ ಎದುರು ಸೈಕಲ್‌ಗಳಿವೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ಮರುದಿನ ಮನೆಗಳ ಬಳಿ ಹೋಗಿ, ಸೈಕಲ್‌ ಕದ್ದುಕೊಂಡು ಪರಾರಿಯಾಗುತ್ತಿದ್ದ. ಕದ್ದ ಸೈಕಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಹಣ ಸಂಪಾದಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಸೈಕಲ್‌ವೊಂದನ್ನು ಕದ್ದಿದ್ದ ಆರೋಪಿ, ದೊಡ್ಡಬಳ್ಳಾಪುರದವರೆಗೂ ತುಳಿದುಕೊಂಡು ಹೋಗಿ ಸಂಬಂಧಿಕರಿಗೆ ಕೊಟ್ಟಿದ್ದ’ ಎಂದರು.

‘ಕೆಲದಿನಗಳ ಹಿಂದೆಯಷ್ಟೇ ಸೈಕಲ್‌ ಕದಿಯುವಾಗ ಜನರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದ. ಆದರೆ, ಎದೆನೋವು ಬಂದ ರೀತಿಯಲ್ಲಿ ನಟಿಸಿ ಆರೋಪಿ ತಪ್ಪಿಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.