ಬೆಂಗಳೂರು ಎಂಎಸ್ಆರ್ ನಗರದಲ್ಲಿ ಸಿಲಿಂಡರ್ ಸ್ಫೋಟ: ಮಳಿಗೆಗೆ ಹಾನಿ
ಬೆಂಗಳೂರು: ಎಂ.ಎಸ್.ರಾಮಯ್ಯ(ಎಂಎಸ್ಆರ್) ನಗರದ ಟಿಬೆಟಿಯನ್ ಫಾಸ್ಟ್ ಫುಡ್ ಸೆಂಟರ್ನಲ್ಲಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಕಟ್ಟಡಕ್ಕೆ ಹಾನಿಯಾಗಿದೆ. ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದವು. ಸ್ಫೋಟದ ಶಬ್ದಕ್ಕೆ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿಬಿದ್ದಿದ್ದರು.
ಸ್ಫೋಟದ ರಭಸಕ್ಕೆ ಬಹುಮಹಡಿ ಕಟ್ಟಡದಲ್ಲಿದ್ದ ಎರಡು ಮಳಿಗೆಯ ಕಬ್ಬಿಣದ ಶೆಟರ್ ಕುಸಿದು ರಸ್ತೆಯ ಬದಿಗೆ ಬಿದ್ದಿತ್ತು. ಕಟ್ಟಡಕ್ಕೂ ಹಾನಿಯಾಗಿದೆ. ಪಕ್ಕದಲ್ಲೇ ಇದ್ದ ರಾಮಯ್ಯ ಸಂಸ್ಥೆಯ ಕಟ್ಟಡದ ಕಿಟಕಿಯ ಗಾಜುಗಳು ಪುಡಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಫಾಸ್ಟ್ ಫುಡ್ ಸೆಂಟರ್ ಬಂದ್ ಮಾಡಿ ಮಾಲೀಕ ಮನೆಗೆ ತೆರಳಿದ್ದರು. ಬೆಳಿಗ್ಗೆ ಸ್ಪೋಟ ಸಂಭವಿಸಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆ ಘಟನೆ ನಡೆದಿದ್ದರೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆಯಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದರು.
ಕಟ್ಟಡ ಹಳೆಯದಾಗಿದ್ದು, ಸ್ಫೋಟದಿಂದ ಕುಸಿಯುವ ಭೀತಿ ಎದುರಾಗಿದೆ. ಕಟ್ಟಡದಲ್ಲಿದ್ದವರನ್ನು ಸ್ಥಳಾಂತರ ಮಾಡಲಾಗಿದೆ.
ಸದಾಶಿವನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಅನಿಲ ಸೋರಿಕೆಯ ಕಾರಣ ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.