ಪ್ರಾತಿನಿಧಿಕ ಚಿತ್ರ
ದಾಬಸ್ಪೇಟೆ: ಕೊಟ್ಟಿಗೆಗೆ ಹಾಕಿದ್ದ ಬೀಗ ಮುರಿದು ಮೂರು ಮೇಕೆ ಹಾಗೂ ಟ್ರ್ಯಾಕ್ಟರ್ ಶೆಡ್ನಲ್ಲಿ ಇಟ್ಟಿದ್ದ ಸುಮಾರು 50 ಲೀಟರ್ ಡೀಸೆಲ್ ಕದ್ದೊಯ್ದಿರುವ ಘಟನೆ ನೆಲಮಂಗಲ ತಾಲ್ಲೂಕು ನರಸೀಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಜಿ.ರಮೇಶ್ ಅವರ ಕೊಟ್ಟಿಗೆಯಲ್ಲಿ ಕಳ್ಳತನವಾಗಿದೆ.
ದೇವರ ಕಾರ್ಯ ಮಾಡಲು 4 ಮೇಕೆ ಸಾಕಿದ್ದೆವು. ಎಂದಿನಂತೆ ಕೊಟ್ಟಿಗೆಯಲ್ಲಿ ಎರಡು ಮೇಕೆಗಳನ್ನು ಕಟ್ಟಿ, ಎರಡು ಬಿಟ್ಟು ಬೀಗ ಹಾಕಿಕೊಂಡು ಬಂದಿದ್ದೆವು. ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆ ಸಮಯಕ್ಕೆ ಎಚ್ಚರಿಕೆ ಆಗಿ ಬಂದು ನೋಡಿದಾಗ ಕೊಟ್ಟಿಗೆ ಬಾಗಿಲು ತೆರೆದಿತ್ತು. ಒಳಗೆ ನೋಡಿದಾಗ ಮೂರು ಮೇಕೆಗಳು ಇರಲಿಲ್ಲ ಎಂದು ರಮೇಶ್ ತಿಳಿಸಿದ್ದಾರೆ.
‘ಟ್ರ್ಯಾಕ್ಟರ್ ಮತ್ತು ಜೆಸಿಬಿ ಯಂತ್ರಗಳಿಗೆ ತುಂಬಿಸಲು 50 ಲೀಟರ್ ಡೀಸೆಲ್ ತಂದು ಇಟ್ಟುಕೊಂಡಿದ್ದೆವು. ಅದನ್ನು ಹೊತ್ತೊಯ್ದಿದ್ದಾರೆ’ ಎಂದು ಅವರು ಹೇಳಿದರು.
ದಾಬಸ್ ಪೇಟೆ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ರಾಗಿ ಚೀಲ ಕಳವು: ಇಮಚೇನಹಳ್ಳಿ ಗ್ರಾಮದ ವೀರಭದ್ರ ಎಂಬುವವರ ಮನೆಯ ಮುಂದೆ ಇಡಲಾಗಿದ್ದ 6 ಚೀಲ ರಾಗಿಯನ್ನು ಕಳ್ಳರು ಕಳವು ಮಾಡಿದ್ದಾರೆ.
50 ಕೆ.ಜಿ ಪ್ಲಾಸ್ಟಿಕ್ ಚೀಲಗಳಲ್ಲಿ ತೂಕ ಮಾಡದೆ ರಾಗಿಯನ್ನು ತುಂಬಿ ಮನೆಯ ಮುಂದೆ ಇಟ್ಟಿದ್ದೆವು. ಅದರಲ್ಲಿ 6 ರಾಗಿ ಚೀಲಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.