ದಾಬಸ್ಪೇಟೆ: ‘ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹಾಗೂ ಗೌರವಿಸುವ ಕೆಲಸ ಪ್ರಸ್ತುತ ಸನ್ನಿವೇಶದಲ್ಲಿ ಅವಶ್ಯಕ’ ಎಂದುಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.
ಶನಿವಾರ ಇಲ್ಲಿನ ಶ್ರಮಿಕರ ಕುಟೀರದಲ್ಲಿ ‘ಭಾರತೀಯ ಸಂವಿಧಾನದ ಮೂಲ ತತ್ವಗಳು ಮತ್ತು ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ನಮ್ಮ ಸಂವಿಧಾನವನ್ನು ಆಯಾ ಕಾಲಘಟ್ಟಕ್ಕೆ ತಿದ್ದುಪಡಿ ಮಾಡಲು ಅವಕಾಶಗಳಿವೆ. ಆದರೆ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಅಧಿಕಾರ ವಿಕೇಂದ್ರೀಕರಣದಂತಹ ಮೂಲ ತತ್ವಗಳನ್ನು ತಿದ್ದಲು ಸಾಧ್ಯವಿಲ್ಲ. ಪ್ರಸ್ತುತ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿಬರುತ್ತಿವೆ. ಅದು ಸಾಧ್ಯವಾಗದ ಮಾತು’ ಎಂದರು.
ಅಖಿಲಭಾರತ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ‘ಸಂವಿಧಾನ ರಚನೆಯಾದ 70 ವರ್ಷಗಳಿಂದ ಅದನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಯಾವ ಸರ್ಕಾರಗಳು ಮಾಡಿಲ್ಲ. ಪಠ್ಯಪುಸ್ತಕದಲ್ಲಿ ಸಂವಿಧಾನ ಇದ್ದರೂ, ಅದು ಅಂಕಗಳಿಕೆಗಷ್ಟೇ ಸೀಮಿತವಾಗುತ್ತಿದೆ. ಇದು ಸಂವಿಧಾನ ನಮಗೇನೆಲ್ಲಾ ನೀಡಿದೆ ಅನ್ನುವುದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗದೆ ಹೋಗಿದೆ’ ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಿಐಟಿಯು ರಾಜ್ಯ ಉಪಾದ್ಯಕ್ಷ ಗೋಪಾಲಗೌಡ, ಸಿಐಟಿಯು ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಪ್ರತಾಪ ಸಿಂಹ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.