ADVERTISEMENT

ಆ.18ರಂದು ವಿಧಾನಸೌಧಕ್ಕೆ ಮುತ್ತಿಗೆ: ವೆಂಕಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 15:55 IST
Last Updated 1 ಆಗಸ್ಟ್ 2025, 15:55 IST
ದುಂಡು ಮೇಜಿನ ಸಭೆಯಲ್ಲಿ ಎಂ. ವೆಂಕಟಸ್ವಾಮಿ ಮಾತನಾಡಿದರು. ಅಶ್ವಥ್ ಅಂತ್ಯಜ, ಆರ್.ಮೋಹನ್ ರಾಜ್, ಹರಿರಾಮ್, ಆರ್.ಎಂ.ಎನ್. ರಮೇಶ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ.
ದುಂಡು ಮೇಜಿನ ಸಭೆಯಲ್ಲಿ ಎಂ. ವೆಂಕಟಸ್ವಾಮಿ ಮಾತನಾಡಿದರು. ಅಶ್ವಥ್ ಅಂತ್ಯಜ, ಆರ್.ಮೋಹನ್ ರಾಜ್, ಹರಿರಾಮ್, ಆರ್.ಎಂ.ಎನ್. ರಮೇಶ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ದಲಿತರಿಗೆ ಮೀಸಲಾಗಿರುವ ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣವನ್ನು ಮೂರನೇ ವರ್ಷವೂ ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ, ಆಗಸ್ಟ್‌ 18ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ ತಿಳಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ‘ದಲಿತರ ಹಣ ದುರ್ಬಳಕೆ– ಮೊಂಡುವಾದ ಮಂಡಿಸುತ್ತಿರುವ ರಾಜ್ಯ ಸರ್ಕಾರ– ದುಂಡು ಮೇಜಿನ ಸಭೆ’ಯಲ್ಲಿ ದಲಿತ ಸಂಘಗಳ ಪದಾಧಿಕಾರಿಗಳು ಹೋರಾಟ ನಡೆಸಲು ತೀರ್ಮಾನ ಕೈಗೊಂಡರು ಎಂದು ಅವರು ಮಾಹಿತಿ ನೀಡಿದರು.

‘ಮುಸ್ಲಿಮರಿಗೆ ಹಲವು ವಿಶೇಷ ಅನುದಾನಗಳನ್ನು ನೀಡಿರುವ ಸಿದ್ದರಾಮಯ್ಯ ಅವರು, ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ. ‘ಕಾಂಗ್ರೆಸ್ಸಿನ ಆದ್ಯತೆ ದಲಿತರು, ಆದಿವಾಸಿಗಳಲ್ಲ, ಮುಸ್ಲಿಮರು' ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ್ದನ್ನು ಸಿದ್ದರಾಮಯ್ಯ ನಿಜಗೊಳಿಸಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಗೃಹ ಸಚಿವ ಪರಮೇಶ್ವರ ಅವರ ಮನೆಯಲ್ಲಿ ಪರಿಶಿಷ್ಟ ಪಂಗಡದ ಶಾಸಕರು ಸೋಮವಾರ ಸಭೆ ಸೇರಲಿದ್ದಾರೆ. ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ದುರ್ಬಳಕೆಗೆ ಅವರೇ ಕಾರಣವಾಗಿದ್ದು, ಅವರನ್ನು ಒಕ್ಕೂಟದ ವತಿಯಿಂದ ಪ್ರಶ್ನಿಸಲಾಗುವುದು’ ಎಂದರು.

ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ದುರ್ಬಳಕೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ (ಸಂಯೋಜಿತ) ಅಶ್ವತ್ಥ್‌ ಅಂತ್ಯಜ, ಭಾರತೀಯ ಪರಿವರ್ತನಾ ವೇದಿಕೆಯ ಹರಿರಾಮ್‌, ಬಹುಜನ ದಲಿತ ಸಂಘರ್ಷ ಸಮಿತಿಯ ಆರ್.ಎಂ.ಎನ್‌. ರಮೇಶ್‌,  ಸಮತಾ ಸೈನಿಕ ದಳದ ಜಿ.ಸಿ. ವೆಂಕಟರಮಣಪ್ಪ, ದಲಿತ ಸಂಘರ್ಷ ಸಮಿತಿಯ (ಭೀಮವಾದ) ಆರ್. ಮೋಹನ್‌ ರಾಜ್‌ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.